Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೬ – ಕಲ್ಪನಾತೀತ ಕಲ್ಪೆನಿ

ಅದಾಗಲೇ ದೋಣಿ ಅಗಟ್ಟಿಯಿಂದ ಸುಮಾರು ಅರ್ಧ ಪರ್ಲಾಂಗ್ ದೂರ ಸಾಗಿತ್ತು. ಅಗಟ್ಟಿ ಜಟ್ಟಿಯಿಂದ ನಮ್ಮ ಕವರತ್ತಿ ನಾವೆ ಕಡೆಗೆ ಹೋಗುತ್ತ ಇದ್ದಾಗ ತಕ್ಷಣ ನೆನೆಪಿಗೆ ಬಂದಿದ್ದು ನಾವು ಕಿನಾರೆಯಲ್ಲಿ ಇಟ್ಟಿದ್ದ ನಮ್ಮ ಸಾಮಾನು ಸರಂಜಾಮುಗಳ ಬಗ್ಗೆ. ತಕ್ಷಣ ನಮ್ಮ ಪರಿಕರಗಳು ಸರಿ  ಇವೆಯಾ ಎಂದು ಪರೀಕ್ಷಿಸಿದ ಮೇಲೆ ಮೂಡಿದ ಭಾವನೆ ಲಕ್ಷದ್ವೀಪದ ನಾಗರಿಕರು ನಿಜವಾಗಿಯೂ ಗೌರವಕ್ಕೆ ಅರ್ಹರು ಎಂಬುದು.  ಇಲ್ಲಿ ಕಳ್ಳತನ ಎಂಬುವ ಪದಕ್ಕೆ  ಬಹುಶ  ಸ್ಥಾನವೇ  ಇಲ್ಲ. ಭಾರತ ಭೂಪ್ರದೇಶದಿಂದ ಬಹು ದೊರದಲ್ಲಿದ್ದರು ಅಗಟ್ಟಿ ದ್ವೀಪದಲ್ಲಿದ್ದ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಮಹಾ ಅಪರಾಧ ಎನ್ನುವ ಕೇಸ್ಗಳು ಇಲ್ಲದೇ ಆರಕ್ಷಕರು ಸಹ ಆರಾಮಾಗಿದ್ದರು. ಏನೇ ವ್ಯಾಜ್ಯಗಳಿದ್ದರು ತಮ್ಮ ತಮ್ಮಲ್ಲಿಯೇ ಕುಳಿತು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳುತ್ತಿದ್ದರು. ಹಾಗಾಗಿ ಇಲ್ಲಿ ದೊಡ್ಡ ಮಟ್ಟದ ಅಪರಾಧಗಳು ಇಲ್ಲವೇ ಇಲ್ಲ.  ನಾವು ಕವರಟ್ಟಿ ನಾವೇಯ ಎಂಬಾರ್ಕೇಷನ್ ಬಾಗಿಲ ಮೂಲಕ ಮತ್ತೆ ಸಾಗಿ ನಮ್ಮ ಕ್ಯಾಬಿನ್ ಕಡೆಗೆ ಹೆಜ್ಜೆ ಹಾಕಿದೆವು. ನಾಳೆ ನಾವು ಕಲ್ಪೆನಿ ದ್ವೀಪಕ್ಕೆ ತಸು ಬೇಗ  ಭೇಟಿ ನೀಡುತ್ತಿದ್ದರಿಂದ ನಮ್ಮ ನಾಳೆಯ ಪರಿಕರಗಳನ್ನು ಹೊಂದಿಸಿ, ಅಂದಿನ ಊಟ ಮುಗಿಸಿ ಬೇಗನೆ ನಿದ್ದೆಗೆ ಜಾರಿದೆವು. 

ಕಲ್ಪೇನಿ ದ್ವೀಪವು ಭಾರತದ ನೈಋತ್ಯ ಕರಾವಳಿಯ ಲಕ್ಷದ್ವೀಪದ ಪ್ರಾಚೀನ ದ್ವೀಪಸಮೂಹದಲ್ಲಿ ನೆಲೆಸಿರುವ ಸ್ವರ್ಗವಾಗಿದೆ. ಸ್ಫಟಿಕದಷ್ಟು  ಸ್ಪಷ್ಟ ವೈಡೂರ್ಯದ ಸಾಗರದ ನೀರು, ಪುಡಿ ಬಿಳಿ ಮರಳು ಮತ್ತು ಹೇರಳವಾದ ಸಮುದ್ರ ಜೀವಿಗಳೊಂದಿಗೆ, ಕಲ್ಪೇನಿ ದ್ವೀಪವು ಪ್ರಕೃತಿ ಪ್ರಿಯರಿಗೆ ಮತ್ತು ಕಡಲತೀರದ ಉತ್ಸಾಹಿಗಳಿಗೆ ಪ್ರಶಾಂತ ಮತ್ತು ರಮಣೀಯ ವಿಹಾರವನ್ನು ನೀಡುತ್ತದೆ. ಈ ದ್ವೀಪವು ತಿಲಕ್ಕಂ ಮತ್ತು ಪಿಟ್ಟಿಯ ಎರಡು ಸಣ್ಣ ದ್ವೀಪಗಳೊಂದಿಗೆ ಮತ್ತು ಉತ್ತರದಲ್ಲಿ ಜನವಸತಿಯಿಲ್ಲದ ಚೆರಿಯಮ್ ದ್ವೀಪವು ಒಂದೇ ಹವಳದ ದಿಣ್ಣೆಯನ್ನು ಹೊಂದಿದೆ. ಕಲ್ಪೇನಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಪೂರ್ವ ಮತ್ತು ಆಗ್ನೇಯ ತೀರದಲ್ಲಿ ಹವಳದ ಅವಶೇಷಗಳ ಬೃಹತ್ ಚಂಡಮಾರುತದ ದಂಡೆ. ಹಾಗಾಗಿ ಇಲ್ಲಿ ಬರಿಗಾಲಿನಲ್ಲಿ ನಡೆಯುವುದು ಕಷ್ಟಕರ ಮತ್ತು ತಸು ಅಪಾಯಕಾರಿ ಕೂಡ ಹೌದು. ಅಪ್ಪಿತಪ್ಪಿ ಕೋರಲ್ ಕಾಲಿಗೆ ಏನಾದರೂ ಚುಚ್ಚಿದರೆ ಅಂದಿನ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಂತೆ.  ಹಾಗಾಗಿ ನಮ್ಮ ಟೂರ್ ಮ್ಯಾನೇಜರ್ ಮುಂಚೆಯೇ ತಿಳಿಸಿದ್ದರು ಡೇಡ್ ಕೋರಲ್ಗಳು  ಅಗಾಧವಾಗಿ ಇವೆ ನೀರಿನಲ್ಲಿ ಇಳಿಯುವಾಗ ಪಾದುಕೆಗಳನ್ನು ಧರಿಸಿ ಎಂದು. ೧೮೪೭ ರಲ್ಲಿ ರಣ ಭಯಂಕರವಾದ ಚಂಡಮಾರುತವು ಈ ತೀರದಲ್ಲಿ ಬೃಹತ್ ಹವಳದ ಬಂಡೆಗಳನ್ನು ಎಸೆದಿದೆ ಎಂದು ನಂಬಲಾಗಿದೆ. ಬೇರೆಯಲ್ಲ ದ್ವೀಪಗಳಿಗೆ ಹೋಲಿಸಿದರೆ ಕಲ್ಪೆನಿ ಸಾಮಾಜಿಕವಾಗಿ ಪ್ರಗತಿಪರ ದ್ವೀಪವಾಗಿದೆ ಎಂದು ಹೇಳಬಹುದು. ಒಮ್ಮೆ ಮಹಿಳಾ ಶಿಕ್ಷಣವನ್ನು ನಿಷೇಧಿಸಿದಾಗ, ನಿಷೇಧವನ್ನೇ ಬಹಿಷ್ಕರಿಸಿ  ಹೆಣ್ಣು ಮಕ್ಕಳು  ಬಂಡೆದ್ದು ಮೊದಲು ಶಾಲೆಗೆ ಹೋಗುತ್ತಿದ್ದರು ಎಂದು ಕೇಳಿದಾಗ ನಂಬಲು ಆಗಲಿಲ್ಲ.  ನಮ್ಮ ರಾಜ್ಯದಲ್ಲಿ ಒಮ್ಮೆ ಸರ್ಕಾರ  ಹಿಜಾಬ್  ಬ್ಯಾನ್ ಮಾಡಿದಾಗ ನಮ್ಮ ಕೆಲವು ಹೆಣ್ಣು ಮಕ್ಕಳು  ಪರೀಕ್ಷೆಯನ್ನೇ ಬಹಿಷ್ಕರಿಸಿದ್ದು ನೆನಪಿಗೆ ಬಂತು, ಎತ್ತಣ ಕಲ್ಪೆನಿ ಎತ್ತಣ ಕರ್ನಾಟಕ..

ಹಾಗಾಗಿ ಕಲ್ಪೆನಿಯ ಹೆಣ್ಣು ಮಕ್ಕಳು ನಿಜಕ್ಕೂ ಆಧುನಿಕ ಯುಗದಲ್ಲಿಯೂ ಸಹ ನಮಗೆ ಶಿಕ್ಷಣ ಮುಖ್ಯ ಎಂದು ಸಾರುವ ಪ್ರಬುದ್ಧ ಪ್ರಗತಿ ಪರರು ಎನ್ನಬಹುದು. 

ಕಲ್ಪೆನಿಗೆ ಕಾಲಿಡುತ್ತಿದ್ದಂತೆ ಅನುಭವಕ್ಕೆ ಬಂದಿದ್ದು ಬೆರಗುಗೊಳಿಸುವ ಹವಳದ ಬಂಡೆಗಳು ಮತ್ತು ರೋಮಾಂಚಕ ಸಮುದ್ರ ಪರಿಸರ ವ್ಯವಸ್ಥೆ. ಬೇರೆ ದ್ವೀಪಕ್ಕಿಂತ ಇದೊಂದು ಭಿನ್ನ ಮತ್ತು ಅದ್ಭುತ ಲೋಕಕ್ಕೆ ಕರೆದೊಯುತ್ತದೆ . ತಾಳೆಗರಿಗಳಿಂದ ಕೂಡಿದ ಕಡಲತೀರಗಳು, ಮೃದುವಾಗಿ ತೂಗಾಡುವ ತೆಂಗಿನ ಮರಗಳು ಮತ್ತು ಹಿಂದೂ ಮಹಾಸಾಗರದ ಬೆಚ್ಚಗಿನ ಅಪ್ಪುಗೆಯಿಂದ ದ್ವೀಪವು ನಿಮ್ಮನ್ನು ಸ್ವಾಗತಿಸಲಾಗುತ್ತದೆ. ದ್ವೀಪದ ನೈಸರ್ಗಿಕ ಸೌಂದರ್ಯವು  ಎಂತಹವರನ್ನು ಮಂತ್ರ ಮುಗ್ಧಗೊಳಿಸುತ್ತದೆ. 

ಕಲ್ಪೇನಿ ದ್ವೀಪವು ಕಲ್ಪೇನಿ ಲಗೂನ್ ಎಂದು ಕರೆಯಲ್ಪಡುವ ಪ್ರಶಾಂತವಾದ ಆವೃತ ಪ್ರದೇಶಕ್ಕೆ ನೆಲೆಯಾಗಿದೆ. ಇದು ನೈಸರ್ಗಿಕ ಅದ್ಭುತವಾಗಿದೆ. ಆವೃತ ಪ್ರದೇಶದ ಶಾಂತ ಮತ್ತು ಆಳವಿಲ್ಲದ ನೀರು ಈಜು, ಕಯಾಕಿಂಗ್ ಮತ್ತು ಇತರ ನೀರಿನ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು  ಅನ್ನು ಒದಗಿಸುತ್ತದೆ. ಪ್ರಶಾಂತವಾದ ನೀರಿನ  ಮೇಲ್ಮೈಯಲ್ಲಿ ವಿಹರಿಸಿದರೆ ನೀರಿನ ಸ್ಪಷ್ಟತೆಗೆ ಆಶ್ಚರ್ಯಚಕಿತರಾಗಿ ಮತ್ತು ಸುತ್ತಮುತ್ತಲಿನ ಸಂಪೂರ್ಣ ಸೌಂದರ್ಯದಲ್ಲಿ ನಿಮ್ಮನ್ನು ಮುಳುಗಿಸಿ ಬಿಡುತ್ತದೆ ಈ ಕಲ್ಪೆನಿ ಎಂಬ ಮಾಯಾಂಗನೆ. 

ನಮ್ಮನ್ನು ಕಲ್ಪೆನಿಯ  ದ್ವೀಪದಲ್ಲಿರುವ “ಕೂಮೆಲ್ ಬೀಚ್ ರೆಸಾರ್ಟ್” ಗೆ ಕರೆತಂದು. ಅಲ್ಲಿನ ಎಳೆನೀರನ್ನು ವೆಲ್ ಕಮ್ ಡ್ರಿಂಕ್ ಆಗಿ ಮೊದಲ ಬಾರಿಗೆ ಕೊಟ್ಟರು  ಯಾಕೋ ಎಳೆನೀರು ಅಷ್ಟಾಗಿ ರುಚಿಸಲಿಲ್ಲ. ಅಲ್ಲಿಂದ ಸಮುದ್ರ ಮೇಲೆ ಕಟ್ಟಿದ ತೇಲಾಡುವ ಸೇತುವೆಯ ಮೇಲೆ ನಿಲ್ಲುತ್ತಿದಂತೆ ಕಂಡಿದ್ದು ಅಗಾಧವಾದ ಸಾಗರದಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತಿದ್ದ ಭಾರಿ ಗಾತ್ರದ ಕಡಲಾಮೆಗಳು. ನಮ್ಮನ್ನು ನೋಡುತ್ತಿದ್ದಂತೆ ಅವುಗಳ ಪ್ರಶಾಂತತೆಗೆ ಭಂಗವಾಗಿ ಅಲ್ಲಿಂದ್ದ ಒಂದೊಂದಾಗಿ ಕಾಲ್ಕಿಳಲು ಆರಂಭಿಸಿದವು ಆದರೂ ನಾವುಗಳು ಅವುಗಳನ್ನು ಬಿಡದೆ ಕ್ಯಾಮರಾದಲ್ಲಿ ಸೆರೆ ಮಾಡಿದ್ದೆ ಮಾಡಿದ್ದೂ. ಅದಲ್ಲದೆ ಕೆಲವೊಂದು ಬಣ್ಣದ ಮೀನುಗಳು ಹಾಗು ಸಮುದ್ರ ಸೌತೆಕಾಯಿ ಜೇವಿಗಳು ಭಾರಿ ಪ್ರಮಾಣದಲ್ಲಿ ಕಂಡು ಬಂದವು. 

ಅಲ್ಲಿಂದ ಕಾಣುವ ಪಿಟ್ಟಿ ದ್ವೀಪದ ದೃಶ್ಯ ಮಾತ್ರ ಎಂದೂ ಮರೆಯಲಾಗದ ದೃಶ್ಯ. ನಮಗಾಗಿ ಪಿಟ್ಟಿ ದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ಆಯೋಜಿಸಿದ್ದರು ಹಾಗಾಗಿ ಬೀಚ್ ರೆಸಾರ್ಟ್ ಇಂದ ಮತ್ತೊಂದು ದೋಣಿ ಬಳಸಿ ನಾವು ಹೋಗಬೇಕಿತ್ತು. ಹಾಗಾಗಿ ನಾವು ಮೋಟಾರು ದೋಣಿ ಏರಿ ಸಾಗುತ್ತಿದ್ದಂತೆ  ಸಾಗರದ ಅಡಿಯ ತುಂಬಾ ಸಮುದ್ರ ಸೌತೆಕಾಯಿಗಳೇ ಕಂಡು ಬಂದವು. ಪಿಟ್ಟಿ ದ್ವೀಪದಲ್ಲಿ ಸ್ನಾರ್ಕೆಲ್‌ ಕಿಟ್ ನೀಡಿದರು. ಈ ಪಿಟ್ಟಿ ದ್ವೀಪದಲ್ಲಿ ಜನವಸತಿಯಿಲ್ಲ, ಸಾಗರದ  ಉಬ್ಬರವಿಳಿತವಿದ್ದಲ್ಲಿ ಸಂಪೂರ್ಣವಾಗಿ ಮುಳುಗುವ ಪಿಟ್ಟಿ ದ್ವೀಪವನ್ನು ಸುತ್ತುವರಿದ ಕೋರಲ್ಗಳು ಹಾಗು ದಡದ ತುಂಬಾ ಬಿದ್ದಿರುವ ಅಲಂಕಾರಿಕ ನಿರ್ಜಿವ ಕೋರಲ್ಗಳು. ನಾವೆಲ್ಲರೂ ಸ್ರೋಕೆಲ್ಲಿಂಗ್ ಮರೆತು ಒಂದೊಂದಾಗಿ ಸಿಕ್ಕ ಬಣ್ಣ ಬಣ್ಣದ ವಿವಿಧ ರೀತಿಯ ಹವಳಗಳನ್ನು ನಮ್ಮ ಬ್ಯಾಗ್ಗೆ ಹಾಕಿಕೊಳ್ಳುವುದರಲ್ಲಿ ಮಗ್ನರಾದೆವು. ಪಿಟ್ಟಿ ದ್ವೀಪಕ್ಕೆ ಕಾಲಿಡುತ್ತಿದ್ದಂತೆ, ಬರಿ ಗಾಲಿನಲ್ಲಿ ಕೋರಲ್ ಮೇಲೆ ಕಾಲಿಟ್ಟು ಇಲ್ಲವೇ ತುಂಬಾ ಹರಿತವಾದ ಕಲ್ಲುಗಳಿಗೆ ತಾಗಿಸಿಕೊಂಡು  ಒಬ್ಬೊಬರಾಗಿ ಗಾಯಾಳುಗಳ ಪಟ್ಟಿ ಸೇರತೊಡಗಿದರು. ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. 

ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. ನಾವೆಲ್ಲ ಆಯಾಸವಾಗುವರೆಗೂ ಈಜಿ ವಾಪಾಸ್ ದೋಣಿ ಹತ್ತಿ ಮತ್ತೆ ಕಲ್ಪೆನಿ ದ್ವೀಪಕ್ಕೆ ಬರುತ್ತಿದ್ದಂತೆ ಸ್ನಾನದ ಗೃಹಕ್ಕೆ ತೆರಳಿ ಬಟ್ಟೆ ಬದಲಾಯಿಸಿ ಊಟಕ್ಕೆ ಅಣಿಯಾದೆವು.  

Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೫ – ಬುದ್ಧನ ಜಾಡು ಹಿಡಿದು

ಜಗತ್ತಿನ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ  ಈಗಿನ ವಾಸ್ತವ ಪರಿಸ್ಥಿತಿಯೊಂದಿಗೆ ಹಿಂದಿನ ಇತಿಹಾಸ ಅಥವಾ ಹಿನ್ನಲೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದ್ದೆ ಇರುತ್ತದೆ. ವಾಸ್ತವ ತಿಳಿದು ಕೊಳ್ಳಲು ವರ್ತಮಾನ ಪತ್ರಿಕೆ ಸಹಾಯ ಮಾಡಿದರೆ, ಇತಿಹಾಸ ತಿಳಿಯಲು ಸ್ಥಳೀಯ ವಸ್ತು ಸಂಗ್ರಹಾಲಯ , ಪ್ರದೇಶಾಧಾರಿತ ಪುಸ್ತಕಗಳು ಇಲ್ಲವೇ ಮಾಹಿತಿ ತಂತ್ರಜ್ಞಾನದ ಮೊರೆ ಹೋಗಬೇಕಾಗುತ್ತದೆ.  ವಸ್ತು ಸಂಗ್ರಹಾಲಯದ  ಸಂಗ್ರಹಣೆಗಳು ಪ್ರಪಂಚದ ಜೈವಿಕ, ಸಾಂಸ್ಕೃತಿಕ ಮತ್ತು ಪರಿಸರ ಇತಿಹಾಸದ ಗ್ರಂಥಾಲಯಗಳಾಗಿವೆ ಮತ್ತು ಹಿಂದಿನದನ್ನು ಅರ್ಥೈಸುವ ಮತ್ತು ಅದರ ಭವಿಷ್ಯದಲ್ಲಿ ನಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಪ್ರಮುಖವಾಗಿವೆ. ಅಂತೆಯೇ, ವಸ್ತುಸಂಗ್ರಹಾಲಯಗಳು ಈ ಇತಿಹಾಸದ ಮೇಲ್ವಿಚಾರಕಗಳಾಗಿವೆ. ನಮ್ಮ ಸಂಕೀರ್ಣ ಮತ್ತು ನಿರಂತರವಾಗಿ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳುವಳಿಕೆಯುಳ್ಳ ಮೆಚ್ಚುಗೆಯನ್ನು ಬೆಳೆಸುವಾಗ ಅದನ್ನು ಸಂತತಿಗಾಗಿ ಸಂರಕ್ಷಿಸುತ್ತವೆ. \

ಲಕ್ಷದ್ವೀಪದ ಬಗ್ಗೆ ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಕೆಲವೊಂದು ಅಂತರ್ಜಾಲದ ಪುಟಗಳಲ್ಲಿ ಕಲೆ ಹಾಕಿದ ಮಾಹಿತಿ ಮಾತ್ರ ಸಿಕ್ಕಿದ್ದು ಆದರೆ ಅದಕ್ಕೆ ಪುರಾವೆಗಳು ಎಲ್ಲಿಯೂ ಸಿಗಲಿಲ್ಲ.  ಅಗಟ್ಟಿಯಲ್ಲಿ ಇದ್ದಾಗ ನೆನಪಾದದು ಅಲ್ಲೊಂದು ವಸ್ತುಸಂಗ್ರಹಾಲಯವಿದೆ ಎಂದು. ಹಾಗಾಗಿ ನನ್ನ ಪ್ರತಿಯೊಂದು ಪ್ರಶ್ನೆಗೂ ಉತ್ತರ ದೊರಕುವ ಸ್ಥಳ ಅದೆಂದು ಅಲ್ಲಿಗೆ ಭೇಟಿ ನೀಡಿದರೆ ಒಂದಿಷ್ಟು ಮಾಹಿತಿ ಪಡೆಯಬಹುದು ಎಂದು ನೇರವಾಗಿ ವಸ್ತು ಸಂಗ್ರಹಾಲಯದ ಕಡೆಗೆ ನಡೆದೆ.  ಪ್ರವಾಸಿಗರು ಬರುವರೆಂದು  ಆ ದಿನ  ವಸ್ತು ಸಂಗ್ರಹಾಲಯ ತೆರೆದಿತ್ತು. ಬೇರೆ ದಿನ ಅಲ್ಲಿಗೆ ಒಂದು ನರಪಿಳ್ಳೆಯೂ ಸಹ ಸುಳಿಯುವುದಿಲ್ಲ ಎಂಬ ಮಾಹಿತಿಯನ್ನು ನಮ್ಮನ್ನು ಹೊತ್ತು ತಂದಿದ್ದ ವಾಹನದ ಚಾಲಕ ತಿಳಿಸಿದನು. 

ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ವರ್ಷದ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಕಲಾ ಇಲಾಖೆಯ ಅಡಿಯಲ್ಲಿ “ಗೋಲ್ಡನ್ ಜುಬಿಲಿ ಮ್ಯೂಸಿಯಂ” ಎಂಬ ವಸ್ತುಸಂಗ್ರಹಾಲಯವನ್ನು ಅಗಟ್ಟಿ  ದ್ವೀಪದಲ್ಲಿ ಸ್ಥಾಪಿಸಲಾಯಿತು. ಸಂಗ್ರಹಣೆಗಾಗಿ ಮತ್ತು ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ದ್ವೀಪವಾಸಿಗಳ ದೈನಂದಿನ ಜೀವನ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ವಿವಿಧ ಕಲಾಕೃತಿಗಳನ್ನು ಸಂರಕ್ಷಿಸುವುದು ಈ ಮ್ಯೂಸಿಯಂನ ಮುಖ್ಯ ಉದ್ದೇಶ . ವಸ್ತು ಸಂಗ್ರಹಾಲಯವು  ಎರಡು  ಅಂತಸ್ತಿನದಾಗಿದ್ದು. ನೆಲ ಮತ್ತು ಮೇಲ ಮಹಡಿಯನ್ನು ಹೊಂದಿದೆ.  

ವಸ್ತು ಸಂಗ್ರಹಾಲಯದಲ್ಲಿ ದ್ವೀಪದ  ಸಮಸ್ತ ಮಾಹಿತಿ ನೀಡುವ ಫಲಕಗಳನ್ನೂ ಅಳವಡಿಸಿದ್ದರು ಹಾಗಾಗಿ ಮಾಹಿತಿ ಎಲ್ಲವೂ ಸಂಕ್ಷಿಪ್ತವಾಗಿತ್ತು . ಅಗಟ್ಟಿಯ ಮ್ಯೂಸಿಯಂ ಇಡೀ ಲಕ್ಷದ್ವೀಪದಲ್ಲಿರುವ ಏಕೈಕ ವಸ್ತುಸಂಗ್ರಹಾಲಯವಾಗಿದೆ. ಇದು ಅಗಟ್ಟಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಸ್ತುಸಂಗ್ರಹಾಲಯವು ‘ಜಗಧೋನಿ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಮಿನಿಕಾಯ್ ಹಾಯಿದೋಣಿಗಳ ಶಿಲ್ಪಗಳನ್ನು ಪ್ರದರ್ಶಿಸುತ್ತದೆ.  ಪುರಾತನ ಜಾಡಿಗಳು, ಮಡಕೆಗಳು, ಮರದ ಹೆಣಿಗೆ ಮತ್ತು ಚಿನ್ನದ ನಾಣ್ಯಗಳ ಸುಂದರವಾದ ವಿನ್ಯಾಸಕಾರರ ಸಂಗ್ರಹವು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ಕೆಲವು ಕಲಾಕೃತಿಗಳು. ವಸ್ತುಸಂಗ್ರಹಾಲಯದಲ್ಲಿನ ವೈವಿಧ್ಯಮಯ ಸಂಗ್ರಹವು ಹಿಂದಿನ ಐತಿಹಾಸಿಕ ಕ್ಷಣವನ್ನು ಪ್ರತಿಬಿಂಬಿಸುತ್ತದೆ. 

ಇದು ‘ಜಗಧೋನಿ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಮಿನಿಕಾಯ್ ಹಾಯಿದೋಣಿಗಳ ಶಿಲ್ಪಗಳನ್ನು ಸಹ ಪ್ರದರ್ಶಿಸುತ್ತದೆ. ಎರಡು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಭಗವಾನ್ ಬುದ್ಧನ ಎರಡು ಪ್ರತಿಮೆಗಳು 9 ಮತ್ತು 12 ನೇ ಶತಮಾನದಿಂದ ಹುಟ್ಟಿಕೊಂಡಿವೆ ಎಂದು ಪರಿಗಣಿಸಲಾಗಿದೆ. ಬುದ್ಧನ ಈ ವಿಗ್ರಹಗಳನ್ನು ಅಂಡಾರ್ಟ್ ದ್ವೀಪದಿಂದ ತಂದು ಸಂರಕ್ಷಿಸಿಡಲಾಗಿದೆ .  ಸುಂದರವಾದ ಕಲಾಕೃತಿಗಳು ಈ ಸ್ಥಳದ ಇತಿಹಾಸವನ್ನು ಇಸ್ಲಾಂ ಧರ್ಮದ ಅವಧಿಗೆ ಹಿಂದಿನದನ್ನು ತೋರಿಸುತ್ತವೆ.

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ನನಗೆ ಅರಿವಿಗೆ ಬಂದಿದ್ದು ಇಲ್ಲಿನ ಪೂರ್ವಜರು ಯಾರು ಇದ್ದರೂ, ಅವರು ಏನು ಪಾಲನೆ ಮಾಡುತ್ತಿದ್ದರು ಎಂಬುದು. ಪ್ರಾಚೀನ ಕಾಲದಿಂದಲೂ ಈ ದ್ವೀಪಗಳ ಇರುವಿಕೆಯ ಬಗ್ಗೆ ನಾವಿಕರಿಗೆ ತಿಳಿದಿದ್ದವು ಆದರೆ ಇಲ್ಲಿ ಮಾನವನ ವಸಾಹತು ಯಾವಾಗ ಆರಂಭವಾಯಿತು ಎನ್ನುವ ನಿರ್ದಿಷ್ಟ ಮಾಹಿತಿ ಇಲ್ಲ. ಬೌದ್ಧಧರ್ಮದ ಜಾತಕ ಕಥೆಗಳು ಈ ದ್ವೀಪಗಳನ್ನು ಉಲ್ಲೇಖಿಸಿವೆ, ಇದು ಕ್ರಿಸ್ತಪೂರ್ವ 6 ನೇ ಶತಮಾನದ  ಸಮಯದಲ್ಲಿ ದ್ವೀಪಗಳಿಗೆ ಬೌದ್ಧಧರ್ಮದ ಹರಡುವಿಕೆಯನ್ನು ದಾಖಲಿಸಿದೆ. ಸ್ಥಳೀಯ ಕಥೆಗಳು ಕ್ರಿ.ಶ. 661 ರಲ್ಲಿ ಅರೇಬಿಯನ್ನರಿಂದ ಇಸ್ಲಾಂ ಆಗಮನವನ್ನು ಸೂಚಿಸುತ್ತವೆ. ನಂತರ, ಚೋಳರು 11 ರಲ್ಲಿ ದ್ವೀಪಗಳನ್ನು ಆಳಿದರು, 16 ರಲ್ಲಿ ಪೋರ್ಚುಗೀಸರು, 17 ರಲ್ಲಿ ಅಲಿ ರಾಜರು, 18 ರಲ್ಲಿ ಟಿಪ್ಪು ಸುಲ್ತಾನ್ ಮತ್ತು ಅಂತಿಮವಾಗಿ ಇದು 19 ನೇ ಶತಮಾನದಲ್ಲಿ 1-6 ರಲ್ಲಿ ಬ್ರಿಟಿಷ್ ರಾಜ್ ಅಡಿಯಲ್ಲಿತ್ತು. ಅರಬ್ ಯಾತ್ರಿಕ ಇಬನ್  ಬಟುಟಾ ತನ್ನ ಅನೇಕ ಕಥೆಗಳಲ್ಲಿ ಈ ದ್ವೀಪಗಳ ಬಗ್ಗೆ ಉಲ್ಲೇಖಿಸಿದ್ದಾನೆ. 

ವಸ್ತು ಸಂಗ್ರಹಾಲಯದಿಂದ ಹೊರ ಬಂದಾಗ ಅರಿವಿಗೆ ಬಂದದ್ದು ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಸಹ ಅಶೋಕನ ಮಗಳು ಸಂಘಮಿತ್ರಳ ಸಮಯದಲ್ಲಿ ದ್ವೀಪಗಳಿಗೆ ಬೌದ್ಧಧರ್ಮದ ಹರಡುವಿಕೆಯನ್ನು ಬೆಂಬಲಿಸುತ್ತವೆ ಎಂಬುದು. 

ವಸ್ತು ಸಂಗ್ರಹಾಲಯದಿಂದ ಹೊರಬಂದು ಮುಂದೆ ಅಗಟ್ಟಿಯಲ್ಲಿದ್ದ ಪುಟ್ಟ ಮತ್ಸಾಲಯದ ಕಡೆಗೆ ಹೊರಟೆವು. ಈ ಅಕ್ವಾರಿಮ್ ಏನು ದೊಡ್ಡದ್ದಲ್ಲ ೧೨ ಚದರ ಜಾಗದಲ್ಲಿ ಇಲ್ಲಿನ ಪುಟ್ಟ ಪುಟ್ಟ ಮೀನಿನ ಸಂಗ್ರಹವಿದೆ ವೀಕ್ಷಣೆಗೆ ಕೇವಲ ಹತ್ತು ನಿಮಿಷ ಸಾಕು ಹಾಗಾಗಿ ಹೇಳುವುದಕ್ಕೂ ಹೆಚ್ಚು ವಿಷಯವಿಲ್ಲ. ಸಂಜೆ ಜಾರುತ್ತಿದ್ದರಿಂದ ನಾವು ಬೇಗ ಅಗಟ್ಟಿಯ ಮತ್ತೊಂದು ತುದಿ ಅಂದರೆ ವಿಮಾನ ನಿಲ್ದಾಣದ ಕಡೆಗೆ ಹೊರಟೆವು. 

ಗಗನ ನೌಕೆಯಲ್ಲಿ ಲಕ್ಷದ್ವೀಪ ತಲುಪಲು ಇರುವ ಏಕೈಕ ವಿಮಾನ ನಿಲ್ದಾಣವನ್ನುಅಗಟ್ಟಿಯಲ್ಲಿ ಹೊಂದಿದೆ ಹಾಗಾಗಿ ಅಗಟ್ಟಿ ದ್ವೀಪ ಲಕ್ಷದ್ವೀಪದ ಹೆಬ್ಬಾಗಿಲು ಎಂದರೆ ತಪ್ಪಾಗಲಾರದು.  ಅಗಟ್ಟಿ ದ್ವೀಪದಲ್ಲಿರುವ ಅಗತ್ತಿ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಕೇವಲ ಕೊಚ್ಚಿನ್ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಹೊಂದಿದೆ ಹಾಗಾಗಿ ಎಲ್ಲಿಂದ ಬಂದರು ನೇರವಾಗಿ ಕೊಚ್ಚಿಯಿಂದ ಮಾತ್ರ ಬರಬೇಕು. ಲಕ್ಷದ್ವೀಪಕ್ಕೆ ಪ್ರವಾಸವನ್ನು ಯೋಜಿಸುವವರು ಮೊದಲು ತಮ್ಮ ವಿಮಾನ ಟಿಕೆಟ್‌ಗಳನ್ನು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಬೇಕು. ಇದು ಪ್ರಪಂಚದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಅಗತ್ತಿಯಿಂದ ವರ್ಷವಿಡೀ ಲಭ್ಯವಿರುವ ಹೆಲಿಕಾಪ್ಟರ್ ಸೌಲಭ್ಯವನ್ನು ಕವರಟ್ಟಿಯವರೆಗೆ ತೆಗೆದುಕೊಳ್ಳಬಹುದು. ಕೊಚ್ಚಿನ್‌ನಿಂದ ಅಗಟ್ಟಿ ತಲುಪಲು ಸುಮಾರು ಒಂದು ಗಂಟೆ ಮೂವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ವಿಮಾನಗಳು ವಾರದಲ್ಲಿ ಏಳು ದಿನಗಳು ಕಾರ್ಯನಿರ್ವಹಿಸುತ್ತವೆ.  ವಿಮಾನ ನಿಲ್ದಾಣ ಚಿಕ್ಕದಿದ್ದು, ವಿಮಾನದಿಂದ ಕಾಣುವ ದೃಶ್ಯ ಮಾತ್ರ  ಅವರ್ಣನೀಯ ಮತ್ತು ಅತ್ಯದ್ಭುತ. 

ಹಾಗೆಯೇ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯು ಅಷ್ಟೇ ಅದ್ಭುತವಾಗಿದೆ , ರಸ್ತೆಯ  ಮಧ್ಯದಲ್ಲಿ ನಿಂತರೆ ನಿಮಗೆ ಪೂರ್ವ ಮತ್ತು ಪಶ್ಚಿಮದಲ್ಲಿ  ಸಾಗರದ  ಅಲೆಗಳ  ಸುಶ್ರ್ಯವ್ಯ ಸಂಗೀತದ ಕಛೇರಿಯಲ್ಲಿ ಪರವಶವಾಗುವುದರಲ್ಲಿ ಅನುಮಾನವಿಲ್ಲ. ಒಂದೇ ಜಾಗದಲ್ಲಿ ಕೂತು ಬಲಕ್ಕೆ ತಿರುಗಿದರೆ ಸೂರ್ಯೋದಯ ಹಾಗು ಎಡಕ್ಕೆ ತಿರುಗಿದರೆ ಸೂರ್ಯಾಸ್ತ ನೋಡಬಹುದು.  ಭಾರತ ಅತ್ಯದ್ಭುತ ರಸ್ತೆ ಅಂದರೂ ತಪ್ಪಲ್ಲ.  

ಸಾಗರವನ್ನು ಸುಮಾರು ನೂರರಿಂದ ಇನ್ನೂರು ಮೀಟರ್  ರಸ್ತೆ ಬೇರ್ಪಡಿಸಿದೆ. ಈ ದೃಶ್ಯ ಮಾತ್ರ  ವರ್ಣಾತೀತ.  ಸಂಜೆಯಾಗಿದ್ದರಿಂದ  ಸೂರ್ಯ ಸಾಗರಕ್ಕೆ ಜಾರುತ್ತಿದ್ದ  ಸಮಯದಲ್ಲಿ ಪೂರ್ಣ ಚಂದ್ರ ಆಗಸಕ್ಕೆ ಹಾರಿ ಧರಣಿಯನ್ನು ಬೆಳಗಲು ಸಜ್ಜಾಗಿ ಶರಧಿಯ ಅಲೆಗಳನ್ನು ತನ್ನೆಡೆ ಸೆಳೆಯುತ್ತಿದ್ದನು. 

ನಾವು ಸಹ ನಮ್ಮ ಅಂದಿನ ಪ್ರವಾಸವನ್ನು  ಮುಗಿಸಿ ಮನದ ತುಂಬ ಅಗಟ್ಟಿಯ  ಸೌಂದರ್ಯವನ್ನು ಅಚ್ಚೋತ್ತಿ ನಾವೆ ಕಡೆ ಹೊರಟೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೩ – ಉಲಕಮುತ್ತು – ಬೊಂಬಿನ ತಾಳಕ್ಕೆ ನಲಿದಂತೆ!!!

ನಾವು ಸ್ಕೂಬಾಗೆ ಹೋಗ ಬಂದ್ಮೇಲೆ ಸುಮ್ಮನೆ ದೋಣಿ ಹತ್ತ್ಕೊಂಡು ಜನ ಹೋಗುತ್ತಾನೆ ಇದ್ದರೂ ಆ ಕಡೆಯಿಂದ ಸ್ಕೂಬಾ ಮುಗಿಸಿ ಕೊಂಡು ಬಂದವರು ಯಾರು ಇರಲಿಲ್ಲ. ಹಾಗಾಗಿ ಜಾನಪದ ಕಾರ್ಯಕ್ರಮ ಒಂದು ಗಂಟೆ ಮುಂದೊಡಿದ್ದರು. ಕಡೆಗೆ ಸ್ಕೂಬಾಗೆ ಹೋದ ೬೦ರ ಮರಳಿ ಅರಳಿದವರು  ನೀರಿಗಿಳಿದ ಮೇಲೆ ಸಮಸ್ಯೆ ಎದುರಿಸಿ ಅದನ್ನು ಸ್ಕೂಬಾ ತರಬೇತುದಾರರು ಬಗೆಹರಿಸುವುದರಲ್ಲೇ ಹರಸಾಹಸ ಪಟ್ಟು ಸಮಯ ಕಳೆದಿದ್ದರು. ಅವರಲ್ಲಿ ಕೆಲವರ ಸಮಸ್ಯೆ ಬಗೆ ಹರಿದು ಡೈವ್ ಮಾಡಿದರೆ ಮತ್ತೆ ಕೆಲವರ ಸಮಯಹರಣವಾಗಿ ಉಳಿದ ಡೈವಿಂಗ್ ಆಕಾಂಕ್ಷಿಗಳಿಗೆ ಪಿತ್ತ ನೆತ್ತಿಗೇರಿತ್ತು. ಅತ್ತ ಸೂರ್ಯ ಜಾರುತ್ತಿದ್ದ ಹಾಗೂ ನೀರಿನ ಒಳಗಿನ ಪ್ರಪಂಚದ ವೀಕ್ಷಣೆಗೆ ಸಮಯವೂ ಜಾರುತ್ತಿತ್ತು. ಹಾಗಾಗಿ ಇತ್ತೀಚೆಗೆ ಹೋದ ದೋಣಿಯವರಿಗೆ ಸ್ಕೂಬಾ ಸಾಧ್ಯವಿಲ್ಲ ಎಂದು ನಿರಾಕರಿಸಿ ನಿಮ್ಮ ಹಣ ವಾಪಾಸ್ ಮಾಡುತ್ತೇವೆ ಎಂಬ ಮಾಹಿತಿ ನೀಡಿದ್ದರು. ಹಾಗಾಗಿ ಮೊದಲ ಡೈವ್ ಆಸೆಯಲ್ಲಿದ್ದ ಕೆಲವರ ಕೋಪದ ಲಹರಿ ಶಿವನು ಮೂರನೇ ಕಣ್ಣು ಬಿಟ್ಟ ಸಂದರ್ಭವನ್ನು ಮೀರಿಸುತ್ತಿತ್ತು. ಕಡೆಗೆ ನಮ್ಮ ಟೂರ್ ಮ್ಯಾನೇಜರ್  ಯಾಸಿರ್ ಅರಾಫತ್ ಮಧ್ಯಸ್ಥಿಕೆಯಿಂದ  ಲಕ್ಷದ್ವೀಪ ಸಮುದ್ರದಲ್ಲಿ ಆಗಬಹುದಾದ ದೊಡ್ಡ ಯುದ್ದವನ್ನು ಸಂಧಾನದ ಮೂಲಕ ಬಗೆ ಹರಿಸಿ ಉಳಿದ ಸ್ಕೂಬಾ   ಡೈವ್ ಆಕಾಂಕ್ಷಿಗಳನ್ನು ಬೇರೆ ಡೈವ್ ಸೆಂಟರ್ ಗೆ ಕರೆದೊಯ್ದು ಡೈವ್ ಮಾಡಿಸಿಕೊಂಡು ಬರಲಾಗುವುದು ಎಂಬ ಮಾಹಿತಿ ತಲುಪಿತು. ಹಾಗಾಗಿ ಜಾನಪದ ಕಾರ್ಯಕ್ರಮವನ್ನು ಆರಂಭಿಸಿ ಎಂಬ ಮಾಹಿತಿಯು ರವಾನೆಯಾಗುತ್ತಿದ್ದಂತೆ ನಾವು ಕಾರ್ಯಕ್ರಮ ನಡೆಯುವ ಪೆಂಡಾಲ್ ಕಡೆಗೆ  ಹೆಜ್ಜೆ ಹಾಕಿದೆವು. ಸುಮಾರು ೧೧ ಗಂಟೆಗೆ   ೮ ಜನರನ್ನು ಹೊತ್ತು  ಡೈವಿಂಗಾಗಿ ಹೋದ ದೋಣಿ ೪ ಗಂಟೆಗೆ ಹಿಂತಿರುಗಿತು ಎಂದರೆ ನಿಮಗೆ ಅರ್ಥವಾಗಬೇಕು ಹೇಗಿತ್ತು ಮರಳಿ ಅರಳಿದವರ ಡೈವ್ ಎಂದು.  

ಉಲಕ್ಕಮುತ್ತು..

ಈ ನೃತ್ಯ ಶೈಲಿಯನ್ನು ‘ಪೋಲ್ ಸ್ಟ್ರೈಕಿಂಗ್’ ನೃತ್ಯ ಎಂದೂ ಕರೆಯುತ್ತಾರೆ. ಇದನ್ನು ನೃತ್ಯ ರೂಪಕ್ಕಿಂತ ದೈಹಿಕ ವ್ಯಾಯಾಮ ಎಂದು ಹೇಳಬಹುದು. ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ನರ್ತಕರು ನುರಿತವರು ಮತ್ತು ಅವರ ಕೈ ಚಲನೆಗಳಲ್ಲಿ ನಿಖರವಾಗಿರುತ್ತದೆ. ಮೊದಲಿಗೆ ಬೊಂಬಿನ ಮಧ್ಯದಲ್ಲಿರುವ  ನರ್ತಕನು ಬೊಂಬಿನ ಚಲನೆ ಆಧರಿಸಿ ಬೊಂಬಿನ ಕಂಬಕ್ಕೆ ತಾಗದಂತೆ ತನ್ನ ಪಾದ ಚಲನೆ ಮಾಡಬೇಕು. ಈ ಬೊಂಬುಗಳು ಒಂದಕ್ಕೊಂದು ಒಟ್ಟಿಗೆ ಬಡಿದಾಗ ಉಂಟಾಗುವ ಶಬ್ದವೇ ಈ ನೃತ್ಯಕ್ಕೆ ಹಿನ್ನಲೆಯ ಸಂಗೀತ ಇದಲ್ಲದೆ  ಭಜನೆಯ ಗಂಟೆಯ ಲಹರಿ ಕೂಡ ಸೇರಿರುತ್ತದೆ. ಇದಕ್ಕೆ ತಕ್ಕಂತೆ ನರ್ತಕನು ಚಪ್ಪಾಳೆ ಹೊಡೆಯುತ್ತ  ಹೊ ಕಾರ ಹಾಡಿ ಕುಣಿಯಬೇಕು. 

ನರ್ತಕರು ಬಿದಿರಿನ ಕಂಬಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಪಾದ ಚಲನೆಯ ದೋಷಕ್ಕೆ  ಅವಕಾಶವಿಲ್ಲ. ಏಕೆಂದರೆ ಇದು ಬಿದಿರಿನ ಕಂಬಗಳ  ನಡುವೆ ವೇಗವಾಗಿ ಪಾದದ ಚಲನೆಯನ್ನು ಮಾಡುವ ನೃತ್ಯಗಾರರಿಗೆ ಗಾಯವಾಗಬಹುದು. ಈ ನೃತ್ಯ ಪ್ರಕಾರವು ಕೇವಲ ಪುರುಷ ಆಧಾರಿತವಾಗಿದೆ. ‘ಉಲಕ’ ಎಂದರೆ ಉದ್ದವಾದ ಬಿದಿರಿನ ಕಂಬ ಆದ್ದರಿಂದ ಕಲೆಗೆ ಹೆಸರು ಬಂದಿದೆ. ಇದನ್ನು ಎರಡು ಶೈಲಿಗಳಲ್ಲಿ ನಡೆಸಲಾಗುತ್ತದೆ.  ಒಂದು ಸುತ್ತಿನಲ್ಲಿ ಮತ್ತು ಇನ್ನೊಂದು ನರ್ತಕರು  ಸುಸ್ತಾಗುವರೆಗೂ ಕುಣಿಯಬಹುದು  ಹಾಗಾಗಿ ಅನುಭವಿ ವ್ಯಕ್ತಿಗಳು ಮಾತ್ರ ಈ ನೃತ್ಯವನ್ನು ಮಾಡಬಹುದು. ಲಕ್ಷದ್ವೀಪ ದ್ವೀಪದಲ್ಲಿ ಕೇವಲ ತೆಂಗು ಬಿಟ್ಟರೆ ಬೇರಾವುದೂ ಕಾಣಸಿಗುವುದಿಲ್ಲ ಹಾಗಾಗಿ  ಉಲಕಮುತ್ತು ಕಲೆಗೆ ಬಿದಿರನ್ನು ಕೇರಳದಿಂದ ರವಾನೆಯಾಗುತ್ತದೆ.  

                                                 

ಲಕ್ಷದ್ವೀಪ ಕೇವಲ ದ್ವೀಪವಲ್ಲ ಅದೊಂದು ಜಾನಪದ ಲೋಕ ಕೂಡ,  ಲಕ್ಷದ್ವೀಪದಲ್ಲಿ ಪ್ರದರ್ಶಿಸಲಾಗುವ  ವಿವಿಧ ಜಾನಪದ ನೃತ್ಯಗಳು ಕೋಲ್ಕಲಿ, ಪರಿಚ್ಚಾಕಲಿ, ಲವ, ದಂಡಿ, ಭಂಡಿಯಾ, ಫುಲಿ, ಅಟ್ಟಂ, ಉಲಕ್ಕಮುತ್ತು, ಓಪಣ್ಣ, ಅಟ್ಟಂ, ಇತ್ಯಾದಿ. ಈ ಪ್ರದೇಶದ ಐತಿಹಾಸಿಕ ಹಿನ್ನೆಲೆಯಿಂದಾಗಿ ಹೆಚ್ಚಿನವು ನೃತ್ಯ ಪ್ರಕಾರಗಳು ಕೇರಳ ಅಥವಾ ಇಸ್ಲಾಮಿಕ್ ಸಂಸ್ಕೃತಿಯಿಂದ ಪ್ರೇರಿತವಾಗಿವೆ. ಈ ಕಲಾ ಪ್ರಕಾರಗಳನ್ನು ಸಾಮಾನ್ಯವಾಗಿ ಜನ್ಮ, ಮದುವೆ ಮತ್ತು ಹಬ್ಬಗಳ ಶುಭ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. 

ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಜಾನಪದ ಕಲೆಗಳ ಪರಿಚಯ ನೀಡಲು ಪ್ರವಾಸ ಆಯೋಜಿಸುವ ಸಂಸ್ಥೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಪ್ರಕಾರದ ನೃತ್ಯಗಳನ್ನು  ಏರ್ಪಡಿಸುವ ಸಂಪ್ರದಾಯ ಆಚರಣೆಯಲ್ಲಿದೆ. 

ಈ ನೃತ್ಯದಲ್ಲಿ ನನ್ನದು ಕೈ ನೋಡುಲಿ  ಎಂದು ಪ್ರವಾಸಿಗರು ತಾವು ತಮ್ಮ ಪಾದ ಚಲನೆ ತೋರಿಸಿ  ನೃತ್ಯದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲಾವಿದರು ಸಹ ಕಲ್ಪಿಸಿ ಆಮಂತ್ರಿಸುತ್ತಾರೆ. ಪ್ರವಾಸಿಗರು ಬೊಂಬಿನ ಮಧ್ಯ ನೃತ್ಯ ಮಾಡುವಾಗ ಬೊಂಬು ಹಿಡಿದವರು ತಸು ಮೆಲ್ಲಗೆ ಕಂಬಗಳ ಚಲನೆ ಮಾಡುತ್ತಾರೆ ಹಾಗಾಗಿ ಖುಷಿಗಾಗಿ ನಾವು ಒಂದು ಈ ನೃತ್ಯಕ್ಕೆ ಒಂದು ಹೆಜ್ಜೆ ಹಾಕಿದೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೨ – ಗ್ಲಾಸ್ ಬಾಟಮ್ ಬೋಟ್ ಓಳಗಿನ ಜಲವಿಹಾರ !!!

ಸ್ಕೂಬಾ ಡೈವ್  ಮುಗಿಸಿ ನಮ್ಮ ದೋಣಿ  ಹೊರಡಲು ಅನುವಾಗುತ್ತಿದ್ದಂತೆ ಅತ್ತ ಕಡೆಯಿಂದ ಮತ್ತೆರಡು ದೋಣಿಯಲ್ಲಿ ಮುಂ
ದಿನ ಡೈವಿಂಗ್ಗೆ ಸಾಕಷ್ಟು ಜನರನ್ನು ಕರೆತಂದಿದ್ದರು. ಅವರಲ್ಲಿ ಬಹುತೇಕರು ೬೦ ರಿಂದ ೭೦ ಆಸುಪಾಸಿನ ತರುಣ ತರುಣಿಯರು. ಅವರ ಉತ್ಸಾಹ ೧೮ರ ಪ್ರಾಯದವರನ್ನು ನಾಚಿಸುವಂತಿತ್ತು ಅವರಲ್ಲಿ ಒಂದಿಬ್ಬರು  ಗೋ ಪ್ರೊ ಕ್ಯಾಮೆರಾ ತಂದಿದ್ದರೆ, ಮತ್ತೊಬ್ಬರು ಡ್ರೋನ್ ತಂದಿದ್ದರು ಮತ್ತೆ ಕೆಲವರು ವಾಟರ್ ಪ್ರೊಫ್ ಫೋನ್ ತಂದಿದ್ದರು ತಮ್ಮ ಅನುಭವವಗಳನ್ನು ದಾಖಲಿಸುವುದಕ್ಕೆ. ನಮ್ಮ ಸ್ಕೂಬಾ ತಂಡದಲ್ಲಿ ಆರು ಜನರಿದ್ದೆವು, ನಾವೆಲ್ಲ ಸೇರಿ  ಮುಂದಿನ ಡೈವಿಂಗ್ಗೆ ಬಂದಿದ್ದವರಿಗೆ  ಶುಭ ಕೋರಿ ನಮ್ಮ ಸ್ಕೂಬಾ ಡೈವ್ ಅನುಭವ ಹಂಚಿಕೊಳ್ಳುತ್ತ ಮಾತುಕತೆಯಲ್ಲಿ ನಿರತರಾಗಿದ್ದ ದಡ ಮುಟ್ಟಿದು ಗೊತ್ತಾಗಲೇ ಇಲ್ಲ. 

ಬಹುತೇಕ ಎಲ್ಲ ಕಡೆ ಪ್ರತಿಯೊಬ್ಬ ಸ್ಕೂಬಾ ಡೈವಿಂಗ್  ಅವಧಿಯನ್ನು  ೨೦ ರಿಂದ ೩೦ ನಿಮಿಷ ಸಮಯದ ಅವಧಿ ನಿಗದಿ ಮಾಡಿರುತ್ತಾರೆ ಸಮಯ ಮುಗಿಯುತ್ತಿದ್ದಂತೆ ನೀರಿನ ಮೇಲ್ಮಯ್ಗೆ ಕರೆ ತರುತ್ತಾರೆ. ಈ ಸಮಯದಲ್ಲಿ ಮೊದಲ ಹತ್ತು ನಿಮಿಷ ನೀರಿನ ಒತ್ತಡವನ್ನು ಸಹಿಸಿಕೊಳ್ಳಲು ಸಮಯ ತಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಕಿವಿಯೊಳಗೆ ನೀರು ಸೇರಿಕೊಂಡರೆ ಮುಗಿದೇ ಹೋಯಿತು ಸ್ಕೂಬಾ ಡೈವ್ ಬೇಡವೇ ಬೇಡ ವಾಪಾಸ್ ಕರೆದುಕೊಂಡು ಹೋಗಿಬಿಡಪ್ಪಾ ಅನ್ನುವಷ್ಟು ಸಾಕಾಗಿ ಹೋಗಿ ಬಿಡುತ್ತೆ. ಮೊದಲ ಹತ್ತು ನಿಮಿಷ ಎಲ್ಲವನ್ನು ಸಹಿಸಿ ಕೊಂಡರೆ ಉಳಿದ ಸಮಯದಲ್ಲಿ ಡೈವಿಂಗ್ ಇಷ್ಟು ಬೇಗ ಮುಗಿಯಿತ ಇನ್ನು ಸ್ವಲ್ಪ ಸಮಯ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ. ನಾವು ಅಣ್ಣಯ್ಯ ದಮ್ಮಯ್ಯ ಅಂತ ಬೇಡಿದರು ಅವರು ಡೈವಿಂಗ್ ಅವಧಿ ವಿಸ್ತರಿಸುವುದಿಲ್ಲ ಆದರೆ ನಾವು ಮಾತ್ರ ನಮ್ಮ ಡೈವಿಂಗ್ ಅವಧಿ ವಿಸ್ತರಣೆಯ  ಪ್ರಯತ್ನವನ್ನು ಬಿಡಬಾರದು.

ಅಗಟ್ಟಿ ಕಡಲ ಕಿನಾರೆಗೆ ವಾಪಾಸ್ ಬಂದಾಗ ಸರಿ ಸುಮಾರು  ೧೧ ಗಂಟೆಯಾಗಿತ್ತು. ಮಧ್ಯಾಹ್ನದ ಅಡುಗೆ ಇನ್ನು ತಯಾರಾಗಿರಲಿಲ್ಲ  ಹಾಗಾಗಿ ಅಲ್ಲೇ ಇದ್ದ ಗ್ಲಾಸ್ ಬಾಟಮ್ ಬೋಟ್ ಯಾನಕ್ಕೆ ಹತ್ತಲು ಅನುವಾದೆವು. ಗ್ಲಾಸ್ ಬಾಟಮ್   ಬೋಟ್ ಎಂದರೆ  ದೋಣಿಯ ತಳಭಾಗದಿಂದ ನೀರಿನ ಪರಿಸರವನ್ನು ವೀಕ್ಷಿಸಲು ಪಾರದರ್ಶಕ ಹಾಗು ವಸ್ತುವಿನ ಕಾಣುವಿಕೆಯನ್ನು ಹಿಗ್ಗಿಸಿ(ವರ್ಧಿಸಿ)  ಕಾಣುವ ಉತ್ತಮ ಸಾಂದ್ರತೆಯಿರುವ ಗಾಜಿನ ಹೊದಿಕೆಯಿಂದ ತಯಾರಾದ ದೋಣಿ. ದೋಣಿ ಚಲಿಸಿದಂತೆ  ಗಾಜಿನ ಮೂಲಕ ನಾವು ನೀರಿನ ಪರಿಸರವನ್ನು ನೋಡಬಹುದು  ಇದನ್ನು ಒಂದು ಅರ್ಥದಲ್ಲಿ ನೀರಿನ ಮೇಲೆ ಓಡಾಡುವ ವಾಹನಗಳ ವಿಂಡೋ ಸೀಟ್ ಎನ್ನಬಹದು. ಸ್ಕೂಬಾ , ಇಲ್ಲವೇ ಸ್ನೋರ್ಕೆಲ್ಲಿಂಗ್ ಬೇಡ ಹಾಗು ನೀರನ್ನು ಕಂಡರೇ ಭಯ ಉಳ್ಳವರು ಎನ್ನುವವರಿಗೆ ಇದು ಸೂಕ್ತ, ನೀರಿನ ಒಳಗೆ ಮುಳುಗುವ ಇಲ್ಲವೇ ಈಜುವ ಅವಶ್ಯಕತೆ ಇಲ್ಲದೇ  ಎಷ್ಟು ಹೊತ್ತಾದರೂ  ಕುಳಿತು ನೀರಿನ ಪರಿಸರವನ್ನು ಕಣ್ಣುತುಂಬಿ ಕೊಳ್ಳಬಹುದು. 

ದೋಣಿ ಆರಂಭದಲ್ಲಿ ಜೋರಾಗಿ ಚಲಿಸಿ ನಂತರ ನೀರಿನ ಒಳಗೆ ಹವಳದ ದಿಬ್ಬ ಕಂಡೊಡನೆ ನಿಲ್ಲಿಸುತ್ತಾರೆ , ನಂತರ ಮೆಲ್ಲಗೆ ದೋಣಿ ಹವಳದ ದಿಬ್ಬದ ಪರಿಸರದ ಸುತ್ತ ಪ್ರದಕ್ಷಿಣೆ ಮಾಡುತ್ತಾ ಸಾಗುತ್ತದೆ. ಅಲ್ಲೆಲ್ಲೂ ವಿಶೇಷವಾದ ಹವಳದ ದಿಬ್ಬ, ಮೀನು, ಆಮೆ ಕಂಡೊಡನೆ ಮತ್ತೆ ನಿಧಾನವಾಗಿ ಸಾಗುತ್ತದೆ.  ಹೀಗೆ  ಸುಮಾರು ಒಂದು ೧೫ ರಿಂದ ಮೂವತ್ತು ನಿಮಿಷ  ನೀರಿನಲ್ಲಿ ಸುತ್ತು ಹೊಡೆಸಿ ದಡ ಸೇರಿಸುತ್ತಾರೆ.  ಆದಾಗ ತಾನೇ ಸ್ಕೂಬಾ ಮುಗಿಸಿದ ನಮಗೆ ಇದೇನು ವಿಶೇಷ ಅನ್ನಿಸಲಿಲ್ಲ ಆದರೇ  ಹವಳ ದಿಬ್ಬ ಕಂಡೊಡನೆ ಮತ್ತೆ ನೀರಿಗೆ ಜಿಗಿಯುವ ಮನಸ್ಸಾಯಿತು ಅಷ್ಟೇ, ಆದರೆ ಜಿಗಿದರೆ ಮೇಲೆ ನಾವಾಗಿಯೇ ವಾಪಾಸ್ ಬರುವುದಕ್ಕೆ ಹರಸಾಹಸ ಪಡಬೇಕಿತ್ತು ಹಾಗಾಗಿ ಯಾವುದೇ ಸಾಹಸಕ್ಕೆ ಕೈ  ಹಾಕದೇ  ಸುಮ್ಮನಾದೆವು. 

ದಡಕ್ಕೆ ಬಂದಾಗ ಮಧ್ಯಾಹ್ನದ ಭೋಜನ ತಯಾರಾಗಿತ್ತು, ಹಾಗೆಯೆ ಸವಿದೇವು ಹಾಗು  ನಮಗಾಗಿ ಅಲ್ಲಿನ ಜಾನಪದ  ನೃತ್ಯದ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಕಾರ್ಯಕ್ರಮ ವೀಕ್ಷಿಸಲು ಸ್ಕೂಬಾಗೆ ಹೋಗಿದ್ದ ತಂಡಗಳು ಇನ್ನು ವಾಪಾಸ್ ಆಗಿರಲಿಲ್ಲ, ಪ್ರೇಕ್ಷಕರ ಕೊರತೆ ಎದ್ದು ಕಾಣುತಿತ್ತು. ಹಾಗಾಗಿ ಕಾರ್ಯಕ್ರಮವನ್ನು ಪ್ರವಾಸಿಗರು ಬರುವವರೆಗೂ ತಸು ಮುಂದೂಡಿದ್ದರು.  ಹಾಗಾಗಿ ಮತ್ತೆ ನೀರಿಗಿಳಿಯುವ  ಅವಕಾಶ ಸಿಕ್ಕಿದರಿಂದ ಮತ್ತೆ ನಾವೆಲ್ಲ ಜಲಚರಿಗಳಾದೆವು.

Uncategorized

ನೀರವತೆಯಲ್ಲಿನ ನೀಲಗುಂದ ಭೀಮೇಶ್ವರ ಪರಿಸರ..

ಹೊಸ ವರ್ಶದ ಮೊದಲ ದಿನ ಯಾವುದಾದರೂ ಹೊಸ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು ಹಾಗಾಗಿ ಹೊಸ ಜಾಗದ ಅನ್ವೇಷಣೆಯಲ್ಲಿ ತೊಡಗಿದ್ದಾಗ ಕಂಡು ಬಂದದ್ದು ಹರಪ್ಪನಹಳ್ಳಿ ತಾಲೂಕಿನ ನೀಲಗುಂದ ಭೀಮೇಶ್ವರ ದೇವಸ್ಥಾನ. ದಾವಣಗೆರೆಯಿಂದ ಸುಮಾರು ಕೊಂಡಜ್ಜಿ ಮಾರ್ಗವಾಗಿ ೪೫ ಕಿಲೋಮೀಟರು ದೂರದ ಪ್ರಯಾಣ ಮಾಡಿ ನೀಲಗುಂದ ತಲುಪಿದ್ದಾಯಿತು. ನೀಲಗುಂದ ಗ್ರಾಮದಿಂದ ನಿರ್ಜನವಾದ  ಜಾಲಿ ಕವಿದ ರಸ್ತೆಯಲ್ಲಿ ಸಾಗುತ್ತಿದ್ದಂತೆ ಕಾಣುವುದು ಕೆರೆಯ ಏರಿ, ಹಾಗೆ ಏರಿಯೇರಿ ಸಾಗುತ್ತಿದ್ದಂತೆ ಕೆರೆ ಬದಿಯ ಅಂಚಿನಲ್ಲಿ ಕಾಣುವುದು ಈ ಅದ್ಭುತವಾದ ದೇಗುಲ. ದೇಗುಲದ ಸುತ್ತಮುತ್ತ ಜನವಸತಿಯಿಲ್ಲದ ಕಾರಣ ಸಂಪೂರ್ಣ ನಿರ್ಜನ ಪ್ರದೇಶ ಅದು. ನಿರ್ಜನವೆಂದರೆ   ಪುರಾತತ್ವ ಇಲಾಖೆಯ ಸಿಬ್ಬಂದಿ ಬಿಟ್ಟರೆ ಮತ್ತಾರು ಅಲ್ಲಿ ಕಂಡು ಬರುವುದಿಲ್ಲ. 

ಸುಮಾರು ೧೧ನೇ  ಶತಮಾನದ ಅಂತ್ಯದಲ್ಲಿ ಕಲ್ಯಾಣಿ ಚಾಲುಕ್ಯರ ಈ ಪ್ರದೇಶದಲ್ಲಿ ದೇವಾಲಯದ ನಿರ್ಮಾಣ ಮಾಡಿದರು . ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೀಲಗುಂದವು  ಬಳಪದ ಕಲ್ಲಿನ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು ಹಾಗಾಗಿ ಸಂಪೂರ್ಣ ದೇಗುಲದ ನಿರ್ಮಾಣದಲ್ಲಿ ಬಳಪದ ಕಲ್ಲನ್ನು ಬಳಸಿ ಅತ್ಯಂತ ನಾಜೂಕು ಹಾಗು ಕಲಾತ್ಮಕವಾಗಿ  ದೇಗುಲವನ್ನು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ. 

ದೇವಾಲಯದ  ಮುಖ್ಯ ದ್ವಾರವು ಪೂರ್ವಾಭಿಮುಖವಾಗಿ ಇದ್ದು ದ್ವಾರದ ಎದುರಿಗೆ ಸೂರ್ಯ ಚಂದಿರರ ಗರ್ಭಗುಡಿ ಇದೆ. ದೇಗುಲದ ಪೂರ್ವ ದಿಕ್ಕಿನಲ್ಲಿ ವಿಶಾಲವಾದ ಕೆರೆಯಿದೆ. ಈ ಕೆರೆಯ ದಿಬ್ಬದ ಅಂಚಿನ ಮೇಲೆಯೇ ಈ ದೇಗುಲವನ್ನು ನಿರ್ಮಿಸಲಾಗಿದೆ. 

ದೇವಾಲಯದ ಒಳಗೆ ಪಶ್ಚಿಮ , ಉತ್ತರ, ದಕ್ಷಿಣಕ್ಕೆ ಮೂರು ಗರ್ಭಗುಡಿಯಿದೆ ಹಾಗೂ ದೇವಾಲಯದ ಹೊರಗೆ  ಪೂರ್ವಕ್ಕೆ ಮತ್ತೊಂದು ಗರ್ಭಗುಡಿಯಿದೆ . ದೇವಾಲಯವು ಒಟ್ಟು ನಾಲ್ಕು ಗರ್ಭಗುಡಿಗಳನ್ನು ಹೊಂದಿದೆ.  ಪ್ರತಿಯೊಂದು ಗರ್ಭಗೃಹವು ಅಂತರಾಳವನ್ನು ಹೊಂದಿದ್ದು ಎಲ್ಲವೂ ಸಭಾಮಂಟಪಕ್ಕೆ ತೆರೆದುಕೊಂಡಿವೆ. ಇಲ್ಲಿನ ಮುಖ್ಯ ದೈವ ಭೀಮೇಶ್ವರನನ್ನು ಪಶ್ಚಿಮದ ಗರ್ಭಗುಡಿಯಲ್ಲಿ ಪೂರ್ವಾಭಿಮುಖವಾಗಿ  ಪ್ರತಿಷ್ಠಾಪಿಸಿದ್ದಾರೆ. ಉತ್ತರ ಮತ್ತು ದಕ್ಷಿಣದ ಗರ್ಭಗುಡಿಯಲ್ಲಿ ಯಾವುದೇ ವಿಗ್ರಹಗಳು ಕಂಡು ಬರುವುದಿಲ್ಲ. ಈ ಉತ್ತರ ಮತ್ತು ದಕ್ಷಿಣದಲ್ಲಿನ ಗರ್ಭಗುಡಿಯಲ್ಲಿ ರಹಸ್ಯವಾದ  ಸುರಂಗ ಮಾರ್ಗವಿದ್ದು ಅದು  ಗೋಣಿ ಬಸವೇಶ್ವರ ದೇಗುಲಕ್ಕೆ ಸಂಪರ್ಕವಿದ್ದು. ಸದ್ಯಕ್ಕೆ ಅದನ್ನು ಮುಚ್ಚಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿಯೇ ಇದ್ದ ದೇಗುಲದ ಮೇಲ್ವಿಚಾರಕರು ತಿಳಿಸಿದರು. ಸಭಾಮಂಟಪವು ಸುಂದರವಾದ ವಿನ್ಯಾಸ ಹೊಂದಿರುವ ನಾಲ್ಕು ಸ್ಥಂಭಗಳಿಂದ ಮಾಳಿಗೆಯು ಆಧಾರಗೊಂಡಿದೆ. ಸಭಾಮಂಟಪದ ಪೂರ್ವಕ್ಕೆ ಕೆರೆಯಿದೆ.  ದೇಗುಲದ ಮುಖ್ಯ ಗೋಪುರದಲ್ಲಿನ ಕೆತ್ತನೆ ನಿಜಕ್ಕೂ ಅಧ್ಭುತ ಹಾಗೂ ನಮ್ಮವರ ತಾಂತ್ರಿಕ ಕೌಶಲ್ಯದ ಹಿರಿಮೆಯನ್ನು ಎತ್ತಿತೋರುತ್ತದೆ. 

                                                             ದೇವಾಲಯದ ಹೊರಭಿತ್ತಿಯಲ್ಲಿ ಹೊರ ಮತ್ತು ಹಿನ್ನಸಂತಗಳಿಂದ ಕೊಡಿದ್ದು ,  ಅರ್ಧಸ್ಥಂಭಗಳನ್ನು ನಿರ್ಮಿಸಿ ಅವುಗಳ ಮೇಲೆ ವೇಸರ ಮತ್ತು ದ್ರಾವಿಡ ಶೈಲಿಯ ಕಿರು ಗೋಪುರಗಳನ್ನು ನಿರ್ಮಿಸಲಾಗಿದೆ. ಪಶ್ಚಿಮದ ಮುಖ್ಯ ಗರ್ಭಗೃಹದ ಮೇಲಿನ ಗೋಪುರದ ಮೇಲೆ ವೇಸರ ಶೈಲಿಯ ಶ್ರೇಣೀಕೃತ ಕಿರು ಗೋಪುರಗಳಿದ್ದು ತ್ರಿಕಳ ವಿಮಾನವಿದೆ. ಪ್ರತಿಯೊಂದು ತಳವೂ ಶಾಲಾ, ಕೂಟಾ, ಪಂಜರವನ್ನು ಹೊಂದಿದ್ದು ಪ್ರತಿ ಶಾಲಾದಲ್ಲಿ ಶಿವ ಮತ್ತು ನಟರಾಜ ಮುಂತಾದ ಮೂರ್ತಿಗಳನ್ನು ಕಾಣಬಹುದು. ಗರ್ಭಗೃಹದ ದ್ವಾರಗಳು ಅಲಂಕೃತ ಪಂಚ ಶಾಖೆಗಳನ್ನು ಹೊಂದಿದ್ದು ತಳಭಾಗದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲರು ಮತ್ತು ಚಾಮರಧಾರಿಣಿಯರನ್ನು ಕಾಣಬಹುದು. ಸಭಾಮಂಟಪದಲ್ಲಿ ನಯಗೊಳಿಸಿದ ನಾಲ್ಕು ಅಲಂಕೃತ ಸ್ಥಂಭಗಳಿದ್ದು ಮಧ್ಯಭಾಗದಲ್ಲಿ ವೇದಿಕೆಯಿದೆ. ದೇಗುಲದ ಮೇಲ್ಚಾವಣಿಯಲ್ಲಿ ಅದ್ಭುತವಾದ ಹೂವಿನ ಕೆತ್ತನೆಯಿದೆ.    

ಗೋಪುರದಲ್ಲಿ ಕಂಡು ಬರುವ  ವಿಗ್ರಹಗಳ ಕೆತ್ತನೆಯು ತಸು ಹೊಯ್ಸಳರ ಶಿಲ್ಪಕಲೆಗೆ ಹೋಲುತ್ತದೆ. ದೇವಾಲಯದ ಒಳ ಆವರಣದಲ್ಲಿ ದೇವಕೋಷ್ಟಕಗಳಿದ್ದು ಅವುಗಳಲ್ಲಿ ಗಣೇಶ, ಮಹಿಷಮರ್ಧಿನಿ ಸಪ್ತಮಾತೃಕೆಯರು ಮತ್ತು ಯಕ್ಷ ಮೂರ್ತಿಗಳಿವೆ. ಸಭಾಮಂಟಪದಲ್ಲಿ ಸಂಧಿಯನ್ನು ಪಶ್ಚಿಮಾಭಿಮುಖವಾಗಿ ಇಡಲಾಗಿದೆ. ಪಾಂಡವರ ವನವಾಸದ ಕಾಲದಲ್ಲಿ ಇಲ್ಲಿ ಈಶ್ವರನನ್ನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ. ಇದಲ್ಲದೆ  ಭೀಮೇಶ್ವರನು ನಂಬಿದ ಭಕ್ತರ  ಮನದ ಇಚ್ಛೆಯನ್ನು ಪೂರೈಸುವನು ಎಂಬ ನಂಬಿಕೆಯಿದೆ.

  

ದೇಗುಲದ ಎದುರಿಗಿನ ವಿಶಾಲವಾದ ಕೆರೆಗೆ ಇಳಿಯಲು ಮೆಟ್ಟಿಲುಗಳಿದ್ದು, ಕುಳಿತು ಅಲ್ಲೇ ಸುತ್ತ ಮುತ್ತಲಿನ ಪರಿಸರವನ್ನು ಸವಿಯಬಹುದು. ಆಸ್ತಿಕನಿಗೆ ದೇವಾಲಯದ ಒಳಾಂಗಣ  ದೈವದ ಸಾಕ್ಷತ್ಕಾರವಾದರೆ , ನಾಸ್ತಿಕನಿಗೆ ದೇಗುಲದ ಹೊರಾಂಗಣ ತಮ್ಮ ನಂಬಿಕೆಯಲ್ಲಿ ಸಾಕ್ಷತ್ಕಾರವಾಗುತ್ತದೆ  ಎಂದರೆ ತಪ್ಪಾಗಲಾರದು ಹಾಗಾಗಿ ದೇಗುಲ ಹೊರಾಂಗಣ  ಪ್ರಶಾಂತತೆ ಬಯಸುವವರಿಗೆ ಪ್ರಸನ್ನತೆ ಮೂಡಿಸುವಂತಿದೆ.

Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೦ – ಅಗಟ್ಟಿ ಲಗೋನಿನ ಮುತ್ತಿಡುವ ಮತ್ಸ ರಾಣಿಯ ಜಾಡು ಅರಸುತ್ತಾ !!!

ನಮಗೆ ಮಿನಿಕಾಯ್ ದ್ವೀಪದ ದರ್ಶನವನ್ನು  ಸರಕು ಸಾಮಾನು ಸಾಗಿಸುವ  ಗಾಡಿಯಲ್ಲಿ(ಲಗೇಜ್  ಆಟೋ) ಕುರಿಗಳಂತೆ ಹಿಂದೆ ಹತ್ತಿಸಿ ಮಾಡಿಸಿದ್ದರು. ಹಾಗಾಗಿ ಅಗಟ್ಟಿಯಲ್ಲಿ ಯಾವ ವಾಹನದಲ್ಲಿ ಮಾಡಿಸುತ್ತಾರೋ ಎನ್ನುವ ಕುತೂಹಲದ ಜೊತೆ ಭಯವಿತ್ತು. ಪ್ರವಾಸಿಗರ ದೋಣಿಗಳು ಅಗಟ್ಟಿ ಬಂದರು ತಲುಪುತ್ತಿದ್ದಂತೆ ನಮ್ಮೂರಿನ  ಬಸ್ ಮತ್ತು ರೈಲು ನಿಲ್ದಾಣದ ಹೊರಗೆ ಕಾಣುವ ಆಟೋ ರಿಕ್ಷಾಗಳು  ಸಾಲಾಗಿ ನಿಂತಿದ್ದವು . ಅಬ್ಬಾ ಅಂತೂ ನಮ್ಮನ್ನು ಈ  ಬಾರಿ ಮಧ್ಯಕಾಲೀನ ಆಧುನಿಕ ಮಾನವರ ರೀತಿಯಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಅಗಟ್ಟಿ ದರ್ಶನ ಮಾಡಿಸುತ್ತಾರೆ ಎಂಬ ಖುಷಿಯಾಯಿತು. ನಾವೆಲ್ಲಾ ಖುಷಿಯಿಂದಲೇ ಆಟೋ ಹತ್ತಿ ಅಗಟ್ಟಿ ಬೀಚ್ ರೆಸಾರ್ಟ್ಗೆ ಕಾಲಿಟ್ಟೆವು. 

ಸುಮಾರು ಬೆಳಗಿನ ಎಂಟೂವರೆ ಗಂಟೆಗೆ ನಾವು ಅಗಟ್ಟಿ ಲಾಗೊನ್ ತಲುಪಿದ್ದೆವು. ಹಿಂದಿನ ರಾತ್ರಿ ಮಲಗಿದ್ದ ಸಾಗರವು ನಿದ್ದೆಯಿಂದ ಆಗತಾನೇ ಕಣ್ಣುಜ್ಜಿ ನಮ್ಮನ್ನು ಎದಿರುಗೊಂಡಿತ್ತು ಎಂದರೇ ತಪ್ಪಾಗಲಾರದು. ಕಡಲ ತೀರದಲ್ಲಿ ಹಲವಾರು ಕಡಲ ಹಕ್ಕಿಗಳು ತಮ್ಮ ಮುಂಜಾವಿನ ಉಪಹಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವು. ದೈತ್ಯ ಕಡಲ ಆಮೆಗಳು ಕಡಲ ಕಿನಾರೆಯಲ್ಲಿ ನಮ್ಮನ್ನು ಮುಟ್ಟುವವರು ಯಾರು ಇಲ್ಲ ಎಂದು ನಿರಂತರವಾಗಿ ಈಜುತ್ತಿದ್ದವು. ಸಮುದ್ರ ತಟದಲ್ಲಿ ಆಧುನೀಕತೆ ಎನ್ನುವ ಪದಗಳನ್ನು ಗುರುತಿಸಲು ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಿಟ್ಟರೇ ಸ್ಪಟಿಕದಷ್ಟು ಶುಭ್ರವಾದ ಬಿಳಿ ಕಣದ  ಮರಳು  ತೀರದ ಉದ್ದಕ್ಕೂ ಚಾಚಿಕೊಂಡಿತ್ತು. ಒಂದಡೆ ಅಬ್ಬರವಿಲ್ಲದ ಪ್ರಶಾಂತತೆ, ಪಿನ್  ಡ್ರಾಪ್ ಸೈಲೆನ್ಸ್ ಶಬ್ದದ ಅಲೆಗಳು ಸಮುದ್ರದಲ್ಲಿ ಲೀನವಾಗಿದ್ದ ಅವಶೇಷಗಳನ್ನು ಹೊತ್ತು ತೀರಕ್ಕೆ ಸಾಗ ಹಾಕುತ್ತಿತ್ತು. ಅಗಟ್ಟಿ ಸಮುದ್ರ ಕಿನಾರೆ ಒಂದರ್ಥದಲ್ಲಿ ಸ್ವರ್ಗದಿಂದ  ಬಿದ್ದ ಒಂದು ತುಣುಕು ಎನ್ನಬಹುದು ಹಾಗಾಗಿ ನಮ್ಮನ್ನು ವಿಸ್ಮಯಗೊಳಿಸುತ್ತದೆ. 

ಸಮುದ್ರ ತೀರದ ಕಡೆ ಹೋಗುತ್ತಿದ್ದಂತೆ, ಯಾರು ಸ್ಕೂಬಾ ಡೈವಿಂಗ್ ಹೋಗುವಿರೋ ದಯವಿಟ್ಟು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ನಮ್ಮ ಟೂರ್ ಗೈಡ್ ಹೇಳುತ್ತಿದ್ದಂತೆ, ಎಲ್ಲರೂ ಒಂದೇ ಬಾರಿಗೆ ಸ್ಕೂಬಾ ಡೈವ್ ಕೌಂಟರ್ ಮುಂದೆ ಸಾಲುಗಟ್ಟಿ ತಮ್ಮ ತಮ್ಮ ಹೆಸರು ನೋಂದಾಯಿಸಿಕೊಂಡರು. ಒಂದು ವಿಷಯ ಹೇಳಲೇ ಬೇಕು ನಮ್ಮ ಜೊತೆ ಬಂದ ಸಹ ಪ್ರವಾಸಿಗರಲ್ಲಿ ರೈಲ್ವೆ ಇಲಾಖೆಯ ನಿವೃತ್ತ ನೌಕರರ ಸುಮಾರು ೫೦ ಜನರ ತಂಡ ಇತ್ತು, ಅವರೆಲ್ಲೂ ಸುಮಾರು ೬೦ ರಿಂದ ೭೦ರ ವಯೋಮಾನದ ತರುಣ ತರುಣಿಯರು. ಹೆಚ್ಚು ಕಡಿಮೆ ಅವರೆಲ್ಲರೂ ಸ್ಕೂಬಾ ಡೈವಿಂಗ್ಗೆ ನೋಂದಾಯಿಸಿ ಕೊಂಡರು  ಎಂದರೇ ಆಶ್ಚರ್ಯ ಆಗದೇ ಇರದು. ಎಂತಹವರಿಗೂ ಮೆಚ್ಚಲೇ ಬೇಕಾದ ಎದೆಗಾರಿಕೆ. ಅವರೆಲ್ಲಾ ಸ್ಕೂಬಾ ಡೈವಿಂಗ್ ಹೋದಾಗ ಅದ ಅನುಭವ ಆಮೇಲೆ ಹೇಳುತ್ತೇನೆ.

ಸ್ಕೂಬಾ ಡೈವಿಂಗ್ ಬಗ್ಗೆ ನಾಲ್ಕು ಮಾತು ಹೇಳಲೇ ಬೇಕು… 

ಮೊದಲು ಡೈವಿಂಗ್ ಆಸಕ್ತರು, ಡೈವಿಂಗ್ಗಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು, ನೋಂದಣಿ ಸಮಯದಲ್ಲಿ ಯಾವುದಾದರು ಅರೋಗ್ಯ ಸಮಸ್ಯೆ ಇದ್ದರೆ ಮುಚ್ಚು ಮರೆಯಿಲ್ಲದೆ  ತಪ್ಪದೇ  ತಿಳಿಸಬೇಕು. ಹಾಗೂ ನಮಗೆ ಏನೇ ತೊಂದರೆ ಆದರೆ ಅದಕ್ಕೆ ನಾವೇ ಜವಾಬ್ದಾರರು ಎಂಬ ಕರಾರಿಗೆ ಸಹಿ ಹಾಕಿದರೆ ಮಾತ್ರ ಸ್ಕೂಬಾ ಡೈವಿಂಗ್ಗೆ ಅವಕಾಶ. ನಂತರ ಡೈವಿಂಗ್ ತಜ್ಞರು ಸ್ಕೂಬಾ ಬಗ್ಗೆ ಸಣ್ಣ ವಿವರಣೆ ನೀಡಿ, ಬಳಸುವ ಉಪಕರಣದ ಬಗ್ಗೆ ತಿಳಿಸುತ್ತಾರೆ. ಮುಂದೆ ಡೈವಿಂಗ್ ಸಮಯದಲ್ಲಿ ತಿಳಿದಿರಬೇಕಾದ  ಸಂಜ್ಞೆ ಅಥವಾ ಸಂಕೇತಗಳ ಬಗ್ಗೆ ವಿವರಿಸುತ್ತಾರೆ. 

ಸ್ಕೂಬಾ ಡೈವಿಂಗ್ ಎಂದರೇ ನೀರೊಳಗೆ ಈಜುವ ಒಂದು ವಿಧಾನವಾಗಿದ್ದು. ಈಜುಗಾರನು ಉಸಿರಾಟದ ಉಪಕರಣಗಳನ್ನು ಬಳಸುತ್ತಾರೆ, ಹಾಗಾಗಿ ನೀರೊಳಗೆ ಉಸಿರಾಡಲು ಉಸಿರಾಟದ ಉಪಕರಣಗಳನ್ನು ಬೆನ್ನಿಗೆ ಕಟ್ಟಿಕೊಂಡು  ಈಜುತ್ತಾರೆ, ಎಲ್ಲಿಯವರೆಗೆ ಉಪಕರಣದಲ್ಲಿ ಆಮ್ಲಜನಕ ಇರೋತ್ತದೆಯೋ ಅಲ್ಲಿಯವರೆಗೆ ನೀರಿನ ಒಳಗೆ ಜಲಚರಗಳಂತೆ ಈಜ ಬಹುದು.  ಅದು ಮೇಲ್ಮೈ ಗಾಳಿಯ ಪೂರೈಕೆಯಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತದೆ. ಹಾಗಾಗಿ ಈಜುವ ಅವಧಿಯು ಸಹ ಸೀಮಿತವಾಗಿರುತ್ತದೆ.  ಉಪಕರಣಗಳ ಜೊತೆ ಕ್ಷಿಪ್ರ  ತರಬೇತಿ ನೀಡಿ ಆಳವಾದ ನೀರಿನ ಜಾಗಕ್ಕೆ ಕರೆದೊಯ್ದು , ಡೈವಿಂಗ್ ಮುನ್ನ ಏನಾದರು ಅನುಮಾನವಿದ್ದರೆ , ಪರಿಹರಿಸಿ ನೀರಿನ ಒಳಗೆ ಕರೆದೊಯ್ದು ಜಲಚರಗಳ ಅದ್ಭುತ ಪರಿಸರವನ್ನು ಮೀನಿನಂತೆಯೇ  ಈಜುತ್ತಾ ತೋರಿಸುತ್ತಾರೆ, ನಮಗೆ ಸ್ಕೂಬಾ ಬರುವುದಿಲ್ಲದ ಕಾರಣ ನುರಿತ ಸ್ಕೂಬಾ ತಜ್ಞ ನಮ್ಮ ಕೈ ಹಿಡಿದು ಕೊಂಡಿರುತ್ತಾರೆ . ಮತ್ತೊಬ್ಬ ಸ್ಕೂಬಾ ಡೈವರ್ ಸಿಬ್ಬಂದಿ  ನಮ್ಮ ನೀರಿನೊಳಗಿನ ಹಾವಭಾವಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಡೈವಿಂಗ್ ಮುಕ್ತಾಯವಾದ ನಂತರ ನಮಗೆ ಹಸ್ತಾಂತರಿಸುತ್ತಾರೆ. ನೀರಿನೊಳಗೆ ನಾವು ಹೇಗೆ ಹೊಂದಿಕೊಂಡಿದ್ದೇವೆ ಎಂದು ಆಗಾಗ ಸಂಜ್ಞೆಗಳ ಕೇಳುತ್ತ, ಏನಾದರೂ ತೊಂದರೆ ಇದ್ದರೆ ತಿಳಿಸಿ ಎಂದು ಕೇಳುತ್ತಾ ಮುನ್ನಡೆಯುತ್ತಾರೆ.  ಏನಾದರೂ ತೊಂದರೆ ಇದ್ದರೆ ಅಲ್ಲಿಯೇ ಸರಿಪಡಿಸುತ್ತಾರೆ , ಇಲ್ಲದಿದ್ದರೆ ಸೀದಾ ವಾಪಾಸ್ ಸಾಗರದ ಮೇಲ್ಮೆಗೆ ಕರೆ ತರುತ್ತಾರೆ.  

ಈ ಮಾಹಿತಿ ಕೊಟ್ಟ ನಂತರ ನಮ್ಮ ಜೊತೆ ಸ್ಕ್ಯೂಬಾಗೆ ನೋಂದಾಯಿಸಿದ  ಮರಳಿ ಅರಳಿದ ತರುಣ ತರುಣಿಯರು ಸ್ಕೂಬಾ ಮಾಡಿದರಾ ಇಲ್ಲವಾ ಅಂತ ಪ್ರಶ್ನೆ ತಮಗೆ ಮೂಡುತ್ತೆ… 

ಉತ್ತರ ಸಹ ನೀವು  ಹಾಗೆ ನಿರೀಕ್ಷಿಸಿ!!!

ನಾವು ಅಗಟ್ಟಿ ದ್ವೀಪದ ನಮ್ಮ ಅಸ್ಸೆಂಬಲ್ ಪಾಯಿಂಟ್ಗೆ ಬಂದಾಗಲೇ ನಾವು ಸ್ಕೂಬಾ ನೋಂದಾಯಿಸಿದ್ದರಿಂದ ನಮಗೆ ಎರಡನೇ ಸರದಿಗೆ ಅವಕಾಶ ಕೊಟ್ಟಿದ್ದರು. ಹಾಗಾಗಿ ಹೆಚ್ಚಾಗಿ ಕಾಯುವ ಸಮಯವಿರಲಿಲ್ಲ. ಡೈವಿಂಗ್ ಗೆ ಕರೆದೊಯ್ಯುವ ದೋಣಿ ಬರುತ್ತಿದ್ದಂತೆ ನಾವೆಲ್ಲರೂ All set for scuba , ಎಂದು ಜೈಕಾರ ಹಾಕಿ ಹೊರಟೆವು. ಸುಮಾರು  ೩೦ ನಿಮಿಷದ ಪ್ರಯಾಣದ ನಂತರ ನಾವು ಡೈವಿಂಗ್ ಪಾಯಿಂಟ್ ತಲುಪಿದಾಗ ನಮ್ಮನ್ನು ಅಲ್ಲೇ ನಿಂತಿದ್ದ ಡೈವಿಂಗ್ ದೋಣಿಗೆ ವರ್ಗಾಯಿಸಿ, ನಮ್ಮ ಸರದಿಗೆ ಮುನ್ನ ಡೈವಿಂಗ್ ಮುಗಿಸಿ ಬಂದಿದ್ದ ಮಂದಿಯನ್ನು ನಮ್ಮ ದೋಣಿಯಲ್ಲಿ ಹತ್ತಿಸಿಕೊಂಡರು. 

ಅವರೆಲ್ಲರಿಗೂ ಡೈವಿಂಗ್ ಹೇಗಿತ್ತು ಎನ್ನುವ ಪ್ರಶ್ನೆಗೆ ಬಂದ ಉತ್ತರ ” ಸೂಪರ್ , ವಾವ್ , ಅವೆ ಸಮ್ , ಗ್ರೇಟ್, ಎಂಜಾಯ್ ಯುವರ್ ಡೈವ್ ” ಎಂದು ತಿಳಿಸಿ ಹೊರಟರು.

ಸರಿ ಸುಮಾರು ದಶಕಗಳ ಮುನ್ನ ಅಂಡಮಾನ್ ಸಮುದ್ರದಲ್ಲಿ ಸ್ಕೂಬಾ ಮಾಡಿದ ಅನುಭವ ನನಗೆ ಇತ್ತು ಹಾಗಾಗಿ ಇಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಭಯವಿರಲಿಲ್ಲ.  ಆದರೆ ಮನದಲ್ಲಿ ಒಂದು ರೀತಿಯ ಅಂಜಿಕೆ ಇದ್ದೆ ಇತ್ತು .  ಅಂದು ನಮಗೆ  ಡೈವಿಂಗ್ ಮುನ್ನ ಸುಮಾರು ಅರ್ಧ ತಾಸು ನೀರಿನ ಒಳಗೆ ನಾವು ಸಮಾನತೆ , ಸಮನ್ವಯ ಸಾಧಿಸಿ, ಡೈವಿಂಗ್ ನಲ್ಲಿ ಪಕ್ವತೆ ಬರುವವರೆಗೂ ತರಬೇತಿ ನೀಡಿ ಅಂಜಿಕೆ ಇಲ್ಲದಂತೆ ಮಾಡಿ , ಆಳದ ಸಾಗರದಲ್ಲಿ ಡೈವಿಂಗ್ ಮಾಡಿಸಿದ್ದರು. ಆದರೆ ಅಗಟ್ಟಿಯಲ್ಲಿ ಆಗಿದ್ದೆ ಬೇರೆ.   

ನಮ್ಮನ್ನು ನೀರಿಗೆ ಇಳಿಸುವ ಮುನ್ನ ನಮಗೆ ಡೈವಿಂಗ್ ಜಾಕೆಟ್ ನೀಡಿ , ನೀರಿಗೆ ಇಳಿಸಿದ ಮೇಲೆ ಸ್ವಲ್ಪ ಸಮಯ ನಮಗೆ ತರಬೇತಿ ನೀಡಿ ನಮ್ಮನ್ನು ನೀರೊಳಗೆ ಕರೆದೊಯ್ಯುತ್ತಾರೆ ಎಂಬ ಭಾವನೆ ನನ್ನಲ್ಲಿ ಇತ್ತು. ಆದರೆ ಅವರು ನಾವು ಹಾಕಿದ್ದ ಬಟ್ಟೆಯಲ್ಲಿಯೇ ನೀರಿಗೆ ಇಳಿಸಿ ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿ , ಉಸಿರಾಡುವ ಉಪಕರಣ ಕೊಟ್ಟು , ಪೈಪ್ ಅಲ್ಲಿ ಉಸಿರಾಡಿ, ಏನಾದರೂ ತೊಂದರೆ ಇದೆಯೇ , ಓಕೆ ,  ನಿಮಗೆ ಎಲ್ಲ ಗೊತ್ತಲ್ಲ , ಒಳಗೆ ಹೋಗೋಣವೆ ಎನ್ನುವುದೇ.   

ಒಮ್ಮೆಲೇ ಜಂಘಾಬಲ ಬಲವೇ ಅಡಗಿತಂತಾಯಿತು, ತಕ್ಷಣವೇ ಅಣ್ಣ ಮತ್ತೊಮ್ಮೆ ಹೇಳಿ , ಅದು ಸರಿಯಿಲ್ಲ ಇದು ಯಾಕೂ ಸರಿಯಿಲ್ಲ, ಇದನ್ನು ಚೆಕ್ ಮಾಡಿ, ಅದನ್ನು ಒಮ್ಮೆ ಚೆಕ್ ಮಾಡಿ, ಎಲ್ಲವೂ ಸರಿ ಇದೆ ಎಂದು ಹೇಳಿ, ನಾನು ಒಮ್ಮೆ ನೀರಿನಲ್ಲಿ ಮುಳಗಿ  ಉಸಿರಾಟ ಮಾಡುತ್ತೇನೆ, ನಂತರ ಹೊರೋಡೋಣ ಎಂದು ಸಮಯ ಪಡೆದು. ಇದ್ದ ಬದ್ದ ದೇವರನ್ನು ನೆನೆದು ‘ಬಂದದ್ದೆಲ್ಲಾ ಬರಲಿ ನಿನ್ನ ದಯವೊಂದಿರಲಿ’ ಎಂದು ಹೊರಟೆ. 

ನನ್ನ ಜೊತೆಗಿದ್ದ ಸಿಬ್ಬಂದಿ ಎಲ್ಲವನ್ನು ಸಮಾಧಾನದಿಂದ ಆಲಿಸಿ ನನ್ನನ್ನು ನಿಧಾನವಾಗಿ ನೀರಿನ ಒಳಗೆ ಕರೆದೊಯ್ದನು. ಮೊದಲ ಐದು ನಿಮಿಷ ಕಿವಿಯೊಳಗೆ ನೀರು ಹೊಕ್ಕಾಗ ಸಾಕಪ್ಪ ಮೊದಲು ಡೈವಿಂಗ್ ಮುಗಿಸು ಎನ್ನುವ ಭಾವವಿತ್ತು, ನಂತರ ನೀರಿನ ಜೊತೆ ಸಮನ್ವಯ ಸಾಧಿಸಿದ ಮೇಲೆ ಮುಂದಿನ ೧೫ ನಿಮಿಷದ ಅದ್ಭುತ  ಯಾನ ಅದಾಗಿತ್ತು. ನನ್ನ ಜೊತೆ ಬಂದ ಸಿಬ್ಬಂದಿಯ ಹೆಸರು ಸಮೀರ್, ಒಂದೊಂದು  ಹವಳ ದಂಡೆಯ ಹತ್ತಿರ ಕರೆದೊಯ್ದು ಅಲ್ಲಿನ ಜಲಚರಗಳ ಪರಿಚಯ ಮಾಡಿಸಿದ, ಬಣ್ಣದ ಬಣ್ಣದ ಮೀನುಗಳ ಹತ್ತಿರ ಸುಳಿದಂತೆ ಅವುಗಳನ್ನು ಪರಿಚಯಿಸಿದ, ಅಲ್ಲಿ ಅದೊಂದು ಮಿನಿನ ಗುಂಪಿತ್ತು,  ಆತ ಅವುಗಳ ಹತ್ತಿರ ಕರೆದೊಯ್ದು ತನ್ನ ಮುಷ್ಠಿ ಹಿಡಿದ  ಆ ಗುಂಪಿನಿಂದ ಬಂದ ಒಂದೊಂದೇ ಮೀನುಗಳು ಮುತ್ತಿಟ್ಟು ವಾಪಾಸ್ ಆದವು. ನನಗೆ ಆತ ಹಾಗೆ ಮಾಡಲು ತಿಳಿಸಿದ ಯಾಕೂ ಹಿಂಜರಿದೆ ಮುಂದಿನ ಜಾಗಕ್ಕೆ ಹೊರಟೆ, ಮತ್ತೆ ಮನಸ್ಸು ಮಾಡಿ ಬೇರೆ ಮೀನುಗಳ ಹತ್ತಿರ ಅವನು ಹೇಗೆ ತಿಳಿಸಿದ್ದನು ಹಾಗೆ ಮುಷ್ಟಿ ಮಾಡಿ ಬೇರೆ ಮೀನಿನ ಹತ್ತಿರ ಕೈ ಒಡ್ಡಿದ , ಮೀನುಗಳು ಹತ್ತಿರ ಬರಲೇ ಇಲ್ಲ. 

ಎಂತಹ ಪ್ರಮಾದವಾಯಿತು , ಮುತ್ತಿಡುವ ಮೀನು ಮರೆಯಾಯಿತು ಎಂದು ಪಶ್ಚಾತ್ತಾಪ ಪಟ್ಟು ಸಿಬ್ಬಂದಿಯನ್ನು ಒಮ್ಮೆ ನೋಡಿದೆ. ಆತ ಬೇಸರ ಬೇಡ ನಾನು ನಿಮ್ಮನ್ನು ಮುತ್ತಿಡುವ ಮೀನಿಗೆ ಭೇಟಿ ಮಾಡಿಸುತ್ತೇನೆ ಎಂದು ಕೈಯಲ್ಲೇ ಅಭಯವಿತ್ತು, ಮತ್ತೆ ಹಿಂದಿನ ಜಾಗಕ್ಕೆ ಕರೆದೊಯ್ದು ಮೊದಲು ತಾನು ಕೈಯೊಡ್ಡಿದನು ಮೀನುಗಳು ಆತನನ್ನು ಹುಡುಕಿಕೊಂಡು ಬಂದು ಆತ್ಮೀಯತೆಯ ಅಭಿಪ್ರಾಯವನ್ನು ಕೈಗೆ ಚುಂಬಿಸುವ ಮೂಲಕ ತೋರಿಸಿದವು. ನಂತರ ನನಗೆ ಕೈಯೊಡ್ಡಲು ಹೇಳಿದಾಗ ಅದೇ ಮೀನುಗಳು ಒಂದೊಂದಾಗಿ ಬಂದು ಆತ್ಮೀಯತೆಯ ಅಭಿಪ್ರಾಯವನ್ನು ಕೈಗೆ ಚುಂಬಿಸುವ ಮೂಲಕ ತೋರಿಸ ತೊಡಗಿದವು. ಕೇವಲ ವಿಡಿಯೋಗಳಲ್ಲಿ ಇಂತಹ ಚಿತ್ರಗಳನ್ನು ನೋಡಿದ್ದ ನನಗೆ ಈ ಅದ್ಭುತ ಅನುಭವ ನೀಡಲು ಸಹಕರಿಸಿದ ನನ್ನ ಸಿಬ್ಬಂದಿಗೆ  ಕೋಟಿ ಕೋಟಿ ಪ್ರಣಾಮಗಳನ್ನು ನೀರಿಲ್ಲಿಯೇ ಸಲ್ಲಿಸಿದೆ. ಮುಂದೆ ನೀರಿನಲ್ಲಿರುವ ಹಲವಾರು ಜಲಚರಗಳನ್ನು ಆತ ತೋರಿಸಿದರು, ಹೀಗೆ ನೀರಿನ ಒಳಗೆ ಅಡ್ಡಾಡುತ್ತಿದ್ದಾಗ  ಮತ್ತೊಬ್ಬ ಸಿಬ್ಬಂದಿ ಕ್ಯಾಮೆರಾ ಹಿಡಿದು ನಿಂತು ನನ್ನ ಹಾವಭಾವಗಳನ್ನೂ ಚಿತ್ರೀಕರಿಸಿ, ಹಾಗೆ ಮಾಯವಾದನು.  ಅಷ್ಟರೊಳಗೆ ಸುಮಾರು ೨೦ ನಿಮಿಷವಾಗಿತ್ತು ಮತ್ಸಲೋಕವೆಂಬ ಮಾಯಾಲೋಕದಲ್ಲಿ ನಮ್ಮ ಪ್ರಯಾಣಕ್ಕೆ ತೆರೆ ಇಳಿಸಿ , ನಮ್ಮನ್ನು ಸಾಗರದ ಮೇಲ್ಮೆಯ್ಗೆ ಕರೆ ತಂದು ಮತ್ತೆ ಲಂಗೂರು ಹಾಕಿದ್ದ ದೋಣಿಗೆ ಹತ್ತಿಸಿದನು. ದೋಣಿ ಹತ್ತುವ ಮುನ್ನ ಆತನಿಗೆ ದೊಡ್ಡ ಧನ್ಯವಾದಗಳು, ಇದೊಂದು ಅನನ್ಯ ,  ಅವಿಸ್ಮರಣೀಯ  ಅನುಭವ ಎಂದು ತಿಳಿಸಿ ಒಲ್ಲದ ಮನಸ್ಸಿನಿಂದ ದೋಣಿ ಹತ್ತಿದೆ. 

ಒಂದು ಮಾತನ್ನು ತಿಳಿಸಬೇಕು , ನಾವು ಡೈವಿಂಗ್ ಹೋದಾಗ ನಮ್ಮ ಜೊತೆ ಬರುವ ಸಿಬ್ಬಂದಿಯ ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ನನ್ನ ಜೊತೆ  ನನ್ನ ಮಡದಿ , ಹಾಗು ನನ್ನ ಮಿತ್ರ ಸಹ ನೀರಿಗೆ ಇಳಿದಿದ್ದ ಆದರೆ ಅವರಿಗೆ ನನಗೆ ಸಿಕ್ಕಂತಹ ಸಿಬ್ಬಂದಿ ಸಿಗದೇ ಸದಾ ಸ್ಕೂಬಾ ಡೈವ್ ಮಾಡಿ ಹಿಂತಿರುಗಿದ್ದರು. ಏನೇ ಆದರು ಜಲಚರೆಯ ಚುಂಬನ ಮರೆಯುವ ಹಾಗಿಲ್ಲ ಬಿಡಿ!!!

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಅಗಟ್ಟಿ ದ್ವೀಪದ ಅಂಗಳದಲ್ಲಿ ..೯

ಮಿನಿಕಾಯ್ ದ್ವೀಪದ  ಜೆಟ್ಟಿಯಿಂದ ಹೊರಟ  ದೋಣಿ ನಿಧಾನವಾಗಿ  ಮಿನಿಕಾಯ್ ಲಾಗೊನ್  ಅನ್ನು ಬೇಧಿಸಿ ಮುಂದೆ ಸಾಗುತ್ತಿತ್ತು. ಆಗಸದಲ್ಲಿ ಅದಾಗಲೇ ಮೂಡಿದ ಪೂರ್ಣ ಚಂದಿರ ಶರಧಿಯನ್ನು ಕಂಡು ತನ್ನ ಗುರುತ್ವ ಬಳಸಿ  ಸಾಗರದಲ್ಲಿ ದೊಡ್ಡ ಗಾತ್ರದ ಅಲೆಗಳನ್ನು ಎಬ್ಬಿಸಿ  ಪ್ರೀತಿಯ ಅಪ್ಪುಗೆಗೆ  ಕಾತರನಾಗಿದ್ದ. ದೋಣಿ ಲಾಗೊನ್ ಪರಿಧಿಯನ್ನು ದಾಟಿದಂತೆ ಹುಣ್ಣಿಮೆಯ ಚಂದಿರನ ಕಂಡ ಶರಧಿ ಹುಚ್ಚೆದ್ದು ನರ್ತಿಸತೊಡಗಿದ. 

ಮೊದಲ ಬಾರಿಗೆ ಸಾಗರದ ನರ್ತನಕ್ಕೆ ಸಿಕ್ಕ ದೋಣಿ ಒಮ್ಮೆಲೇ ಮೇಲಿನಿಂದ ಏರಿ ಕೆಳಗಿಳಿಯಿತು,  ‘ಓಹ್’ ಎಂಬ ಝೇಂಕಾರವೂ ಆರ್ತನಾದವೊ ದೋಣಿಯಲ್ಲಿ ಮೊದಲ ಬಾರಿಗೆ ಮಾರ್ದನಿಸಿತು, ಕೆಲವರಿಗೆ ಹೃದಯ ಬಡಿತ ಕ್ಷಣ ಮಾತ್ರಕ್ಕೆ ನಿಂತಂತೆ, ಮತ್ತೊಬ್ಬರಿಗೆ  ಶ್ವಾಸವೇ ಬಿಗಿ ಹಿಡಿದಂತೆ,  ಮತ್ತೆ ಕೆಲವರಿಗೆ ಹೊಟ್ಟೆ ತೊಳಸಿದಂತೆ ಭಾಸವಾಗಿ ದೇವಾ ಮೊದಲು ಈ ದೋಣಿಯನ್ನು ನಾವೆಯ ಬಳಿ ಬಿಡು ಎಂದು ಪ್ರಾರ್ಥಿಸಿದರೆ, ಕೆಲವರು ಈ ಅದ್ಭುತ  ಅಭೂತಪೂರ್ವ ಅನುಪಮ ಅನುಭವದಲ್ಲಿ ಲೀನರಾಗಿ ದೋಣಿಯ ಅಂಚನ್ನು ಬಿಗಿಯಾಗಿ ಹಿಡಿದು ಆಸ್ವಾದಿಸುತ್ತಿದ್ದರು.

ಇವೆಲ್ಲ ಅನುಭವಗಳ ನಡುವೆ ನಮ್ಮ ನೌಕೆ ದೊರದಲ್ಲಿ ಕಾಣುತ್ತಿತ್ತು, ನೌಕೆ ಕಾಣುತ್ತಿದ್ದಂತೆ  ಬೆಳಗ್ಗೆ ನೌಕೆ ಬಿಡುವ  ಮುನ್ನ ಹುಟ್ಟಿದ್ದ ಅನುಮಾನ ಮತ್ತೆ ಕಾಡ ತೊಡಗಿತು ಅದೇ  ‘ ನೌಕೆಯಲ್ಲಿ ಬೀಗವಿಲ್ಲದ ಕ್ಯಾಬಿನ್ ನಲ್ಲಿದ್ದ ನಮ್ಮ ಲಗೇಜುಗಳು ಕತೆ ‘ ದೋಣಿ ಯಾವಾಗ ಹಡಗು ತಲುಪುತ್ತದೆಯೂ ಎಂದು ತನ್ನ ತಾನಾಗಿಯೇ ಮನದಲ್ಲೇ ಪಠನೆ ಆರಂಭವಾಗಿತ್ತು. ಮೋಟಾರ್ ದೋಣಿಯಿಂದ ನೌಕೆಗೆ ಹಾರುತ್ತಿದಂತೆಯೇ ಮೊದಲು ಕ್ಯಾಬಿನ್ ಕಡೆಗೆ ಓಡಿದೆ, ನೌಕೆಯ ಸಿಬ್ಬಂದಿಯು ಕ್ಯಾಬಿನ್ ಸ್ವಚ್ಛ ಮಾಡಿದ್ದು ಕಂಡು ಬಂದಿತು, ತಕ್ಷಣ ನಮ್ಮ ಸಕಲ ಪರಿಕರಗಳು ಇವೆಯೇ ಎಂದು ಪರೀಕ್ಷಿಸಿ ನಿಟ್ಟುಸಿರುಬಿಟ್ಟೆವು. ಮೊದಲ ದಿನ ತಸು ತ್ರಾಸಾದರು ಏನೂ ಹೊಸತನವಿತ್ತು. ಹಾಗೆಯೇ  ಅಂದಿನ ಊಟ ಮುಗಿಸಿ, ಹುಣ್ಣಿಮೆಯ ಚಂದಿರನ ದರ್ಶನ ಮಾಡಿ,  ನಾವು ನಾಳೆ  ಅಗಟ್ಟಿ ದ್ವೀಪಕ್ಕೆ ಹೋಗಬೇಕಾದ್ದರಿಂದ ಬೇಗ ತಯಾರಾಗಬೇಕಿತ್ತು ಹಾಗಾಗಿ ಸೀದಾ ಕ್ಯಾಬಿನ್ಗೆ ತೆರಳಿ ನಿದ್ರೆಗೆ ಜಾರಿದೆವು. 

ಕಣ್ಣು ಮುಚ್ಚುವ ಮೊದಲು  ಬುರ್ ಸುರ್ರೂ …. ಎಂದು ಸದ್ದು ಮಾಡುತ್ತಿದ್ದ ನೌಕೆ  ಯಾಕೋ ಸದ್ದು ಮಾಡದೇ ಅಗಟ್ಟಿ ದ್ವೀಪದ  ಸನಿಹಕ್ಕೆ ಬಂದೊಡೊನೆ , ಅಗಟ್ಟಿಯ ಸೌಂದರ್ಯಕ್ಕೆ ಮಾರು ಹೋಗಿ ಸ್ಥಬ್ಧನಾಗಿದ್ದ, ಅದಾಗಲೇ ಕ್ಯಾಬಿನ್ ಹೊರಗೆ  ನೌಕೆಯ ಸಹ ಪ್ರಯಾಣಿಕರ ಓಡಾಟದ ಸಪ್ಪಳ ಕೇಳಿಸುತ್ತಿತ್ತು. ರಾತ್ರಿಯೆಲ್ಲ ಸದ್ದು ಮಾಡುತ್ತಿದ್ದ ನೌಕೆಯು ಕಣ್ಣು ಮುಚ್ಚಿ ಕಣ್ಣು ಮತ್ತೆ ಕಣ್ಣು ಬಿಡುವ ಸಮಯದೊಳಗೆ  ಅಗಟ್ಟಿ ದ್ವೀಪದ ಸಮೀಪ ನಿಂತಿತ್ತು. ನಾವು ನಿತ್ಯ ಕರ್ಮ ಮುಗಿಸಿ ಡಿಸ್ ಎಂಬಾರ್ಕಷನ್  ಬಾಗಿಲ ಕಡೆಗೆ ನಡೆದೆವು. ಅದಾಗಲೇ ಬಹುತೇಕ ದ್ವೀಪವಾಸಿಗಳನ್ನು ಮೋಟಾರ್ ದೋಣಿಯ ಮೂಲಕ ರವಾನೆ ಮಾಡಲಾಗಿತ್ತು ಹಾಗಾಗಿ ಅಲ್ಲಿ ಉಳಿದಿದ್ದು ಕೇವಲ ಪ್ರವಾಸಿಗರು ಮಾತ್ರ. ನೌಕೆಯನ್ನು ತಸು ಆಳವಾದ ಸಾಗರದಲ್ಲಿ ಅದಾಗಲೇ ಲಂಗೂರು ಹಾಕಿ ನಿಲ್ಲಿಸಿದ್ದರು ಮತ್ತು ನೌಕೆಯಿಂದ ದ್ವೀಪವು ಸುಮಾರು ಒಂದು ಕಿಲೋಮೀಟರು ದೊರದಲ್ಲಿತ್ತು. ನಮ್ಮನ್ನೆಲ್ಲಾ ಒಂದೊಂದೇ  ಮೋಟಾರ್ ದೋಣಿಯಲ್ಲಿ ನೌಕೆಯಿಂದ  ಅಗಟ್ಟಿ ದ್ವೀಪಕ್ಕೆ ಬಿಳ್ಕೊಟ್ಟರು. 

ನಾವು ಇಂದು ಭೇಟಿ ನೀಡುವ ಅಗಟ್ಟಿ ಬಗ್ಗೆ ನಾಲ್ಕು ಮಾತು ಹೇಳಲೇ ಬೇಕು, ಅಗಟ್ಟಿ  ದ್ವೀಪವು  ಸುಮಾರು ೬ ಕಿಲೋಮೀಟರು ಉದ್ದವಿದೆ. ಒಂದು ತುದಿಯಲ್ಲಿ ೧೦೦ ಮೀಟರ್ ಇಂದ ಹಿಡಿದು ಮತ್ತೊಂದು ತುದಿಯಲ್ಲಿ ೧ ಕಿಲೋ ಮೀಟರ್ ಅಗಲವಿದೆ ಅಷ್ಟೇ. ನೀವು ನೂರು ಮೀಟರ್ ಅಗಲವಿರುವ ಸ್ಥಳದಲ್ಲಿ ಕುಳಿತರೆ ಸೂರ್ಯೋದಯ ಹಾಗು ಸೂರ್ಯಾಸ್ತವನ್ನು ಕುಳಿತ ಸ್ಥಳದಲ್ಲಿಯೇ ಮಿಸುಕಾಡದೆ ಕಣ್ಣು ತುಂಬಿಕೊಳ್ಳಬಹುದು ಎಂದು ಕೇಳಿದರೆ ನೀವು ಆಶ್ಚರ್ಯ ಪಡಬಹುದು ಅಲ್ಲವೆ. ನಾವು  ಕೊಚ್ಚಿಯಿಂದ   ಸಮುದ್ರ ಮಾರ್ಗವಾಗಿ ನೌಕೆಯ ಮೂಲಕ ಲಕ್ಷದ್ವೀಪನ್ನು ತಲುಪಲು ಸುಮಾರು ೨೦ ಗಂಟೆಯಾದರೂ ಬೇಕು ಆದರೆ  ಆಕಾಶ ಮಾರ್ಗವಾಗಿ ಲಕ್ಷದ್ವೀಪ ತಲುಪಲು ಸುಮಾರು ಒಂದುವರೆ ತಾಸು ಸಾಕು. ಆಕಾಶ ಮಾರ್ಗವಾಗಿ ಲಕ್ಷದ್ವೀಪ ತಲುಪಲು ಇರುವ ಏಕೈಕ  ವಿಮಾನ ನಿಲ್ದಾಣ ಅಗಟ್ಟಿ ದ್ವೀಪದಲ್ಲಿದೆ.  ಇಲ್ಲಿನ ವಾತಾವರಣವು  ಹೆಚ್ಚು ಕಡಿಮೆ ಕೇರಳದ ಪರಿಸರವನ್ನು ಹೋಲುತ್ತದೆ. ಇಲ್ಲಿ ಇಸ್ಲಾಂ ಧರ್ಮಿಯರು ಬಹುಸಂಖ್ಯಾತರಿದ್ದು, ತೆಂಗಿನ ನಾರು, ಮೀನುಗಾರಿಗೆಯು ಪ್ರಮುಖ ಉದ್ಯೋಗವಾಗಿದೆ.  

ಸುಮಾರು ಎಂಟು ವರೆ ಗಂಟೆಗಾಗಲೇ ನಾವು ಅಗಟ್ಟಿ ದ್ವೀಪದ ಅಗಟ್ಟಿ ಐಲ್ಯಾಂಡ್ ರೆಸಾರ್ಟ್ಗೆ ನಾವು ಕಾಲಿಟ್ಟಿದ್ದೆವು. ದ್ವೀಪದಲ್ಲಿ ಕಳೆಯಲು ಬಹಳ ಸಮಯ ಸಿಕ್ಕಿದ್ದು ಸ್ವರ್ಗಕ್ಕೆ  ಗೇಣು ದೂರವೆಂಬ ಭಾವನೆ ಮೂಡಿತು. 

Uncategorized

ಅಭಿಯಂತರ ದಿನಾಚರಣೆ – ೨೦೨೩

ಕಾರ್ಯ ನಿಮಿತ್ತವಾಗಿ ಒಂದು ಸ್ಥಳದ  ತಪಾಸಣೆಗಾಗಿ  ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಕರೆದಿದ್ದರು .  ಆಗ ಅವರು  ಸುಮಾರು ಎಪ್ಪತೈದು  ವಸಂತಗಳನ್ನು ಕಂಡರೂ  ಅವರು  ಕಾಯಕದಲ್ಲಿ  ಇಪ್ಪತೈದರ  ತರುಣರಾಗಿದ್ದರು ಸರ್ ಎಂ ವಿ.  ಅವರ ಜೊತೆಗೆ ತರುಣರಾದ ಎಂ ಆರ್ ವರದರಾಜನ್ ಅವರು  ಜೊತೆಗಿದ್ದರು.  ಆ ತಪಾಸಣೆ ಮಾಡುವ ಸ್ಥಳದ ತಸು ಎತ್ತರದಲ್ಲಿದ್ದು ಅಲ್ಲಿಯವರೆಗೆ ಹೋಗುವುದು ಶ್ರೀಗಳಿಗೆ  ಬೇಡವೆಂದು ವರದರಾಜನ್ ಅವರು ತಿಳಿಸಿ ನಾನೆ ಹೋಗಿ ನೋಡಿಕೊಂಡು ಬಂದು ತಮಗೆ ವರದಿ ಒಪ್ಪಿಸುವೆ ಎಂದು ತಿಳಿಸುತ್ತಾರೆ. 

ಆಗ ಶ್ರೀಗಳು ” ನೀವು ಏರಬಲ್ಲಿರಿ ಅಲ್ಲವೇ? ” ಎಂದು ಕೇಳಿದರು. 

ವರದರಾಜನ್ ಅವರು ನಾನು  ” ಏರಬಲ್ಲೆ ”  ಎಂದು ಉತ್ತರಿಸಿದರು. 

“ನೀವು ಏರಬಲ್ಲಿರಿ ಎಂದರೆ ನಾನು ಏಕೆ ಏರಲಾರೆ ” ಎಂದು ಹೇಳಿದರು. 

ವರದರಾಜನ್  ಅವರು ಎಷ್ಟೇ ಬೇಡ ಎಂದು ಪ್ರಾರ್ಥಿಸಿದರೂ , ಸೀದಾ ತಪಾಸಣೆ ಮಾಡಬೇಕಾದ ಸ್ಥಳ ತಲುಪಿ , ಎಲ್ಲಾ ವಿವರಗಳನ್ನು ಪಡೆದು  , ಪರಿಶೀಲನೆ ಮಾಡಿ ಟಿಪ್ಪಣಿ ಮಾಡಿಕೊಂಡು, ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದರು. 

ತಮಗೆ ವಹಿಸಿದ ಕಾರ್ಯವನ್ನು ಅವರು ಈ ಇಳಿವಯಸ್ಸಿನಲ್ಲಿ ಬೇರೆಯವರಿಗೆ ವಹಿಸಬಹುದಿತ್ತು, ಬೇರೊಬ್ಬರ ವರದಿಗೆ ಅವರು ತೃಪ್ತರಾಗದೆ ತಾವೇ ನಿಂತು ವಿವರ ಪಡೆದರು. ತಮಗೆ ವಹಿಸಿದ ಕರ್ತವ್ಯಕ್ಕೆ ಎಂದು ದ್ರೋಹ ಬಗೆಯದೇ  ಕರ್ತವ್ಯ ನಿಷ್ಠೆ ಪಾಲನೆ ಮಾಡಿದರು.

ಇಂದು ಸರ್ ಎಂ ವಿ ಅವರ ಜನ್ಮ ದಿನ, ನಾವೆಲ್ಲ ಹೆಮ್ಮೆಯಿಂದ ಅಭಿಯಂತರ ದಿನಾಚರಣೆ ಎಂದು ಆಚರಿಸುತ್ತೇವೆ, ಅವರ ಜೀವನದಲ್ಲಿ  ಪಾಲಿಸಿದ  ಹಾಗು ಸಾಧಿಸಿದ ಆದರ್ಶಪಾಲನೆನ್ನು ನಾವೆಲ್ಲ ಸ್ಮರಿಸಿ , ಜೀವನದಲ್ಲಿ ಅಳವಡಿಸಿಕೊಳ್ಳೋಣ. 

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

                                                        ಅಭಿಯಂತರ ದಿನಾಚರಣೆ – ೨೦೨೨

                                           http://timepassri.blogspot.com/2022/09/blog-post.html

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. ೮

ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕ್ಷಣದಿಂದ ನಾವು ಪ್ರಕೃತಿ ಮಾತೆಗೆ ಸಂಪೂರ್ಣ ಶರಣಾಗಿದ್ದೆವು, ಆದರೆ ಮಿನಿಕಾಯ್ ದ್ವೀಪದ ಪ್ರಕೃತಿಯಲ್ಲಿನ ಮಾನವರ ಬಗ್ಗೆ ಹಿಂದಿನ ಇತಿಹಾಸ ಕೇಳಿ ತಸು ಬೆಚ್ಚಿಬಿದ್ದಿದೆವು. ಮಿನಿಕ ರಜ್ಜೆ ಬಗ್ಗೆ ತಿಳಿದು ಕೊಳ್ಳಲು ಅವರ ನಿವಾಸಗಳಿಗೆ ಭೇಟಿ ಅವರ ಜೀವನ ಶೈಲಿ ಆಚಾರ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ  ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗಾಗಿ  ಮಿನಿಕಾಯ್ ದ್ವೀಪದ ಪ್ರಮುಖ ಹಳ್ಳಿಯಾದ ಫಾಲೆಸ್ಸೆರಿಗೆ ಭೇಟಿಯ ಸಲುವಾಗಿ ಹೊರಟೆವು. 

ಮಿನಿಕಾಯ್ ದ್ವೀಪದಲ್ಲಿ ಸುಮಾರು ಹತ್ತು ಹಳ್ಳಿಗಳಿವೆ , ಅವುಗಳು  ಬಡ , ಆಗುಮಾಗು , ಬೋಡುತೀರಿ , ಸೆಡಿವಲು , ಅಲೋಡಿ , ಫನ್ ಹಿಲಾಲ್ , ಕುದೇಹಿ, ಫಾಲೆಸ್ಸೆರಿ  ಮತ್ತು ಕೇಂಡಿಪಾರ್ಟಿ.  ಮಿನಿಕಾಯ್  ದ್ವೀಪದ ಬೌಗೋಳಿಕವಾಗಿ  ಲಕ್ಷದ್ವೀಪಕ್ಕೆ ಸೇರಿದ್ದರೂ ಸಾಂಸ್ಕೃತಿಕವಾಗಿ, ಆಚಾರ ವಿಚಾರಗಳಲ್ಲಿ ಲಕ್ಷದ್ವೀಪದಿಂದ ಸಂಪೂರ್ಣವಾಗಿ ಬೇರ್ಪಟ್ಟು  ಮಾಲ್ಡಿವ್  ದ್ವೀಪವನ್ನು ಅನುಸರಿಸುತ್ತದೆ.  ೧೯೪೭ರಲ್ಲಿ  ಭಾರತ ಸ್ವತಂತ್ರವಾದ ನಂತರ ಮಿನಿಕಾಯ್ ದ್ವೀಪ ಮಾಲ್ಡಿವ್  ದ್ವೀಪ ಬ್ರಿಟೀಷರ ಅಧೀನದಲ್ಲಿತ್ತು, ನಂತರ ೧೯೫೬ ಭಾರತಕ್ಕೆ ಹಸ್ತಾಂತರವಾಯಿತು ಆದರೂ ಮಾಲ್ಡಿವ್  ಸ್ವತಂತ್ರ ಪಡೆದ ನಂತರ ೧೯೭೬ ರಲ್ಲಿ ಮಿನಿಕಾಯ್ ಹಾಗು ಮಾಲ್ಡಿವ್ ಗಡಿಯನ್ನು ಗುರುತಿಸಿ ಮಾನ್ಯ ಮಾಡಿತು ಹಾಗಾಗಿ ಇಂದಿನವರೆಗೂ ಮಿನಿಕಾಯ್ ಮತ್ತು ಮಾಲ್ಡಿವ್ ಸಾಂಸ್ಕೃತಿಕವಾಗಿ  ಸಹೋದರರಿದ್ದಂತೆ. 

ಇಲ್ಲಿನ ಪ್ರತಿಯೊಂದು ಹಳ್ಳಿಯನ್ನು ‘ಅವ’ ಎಂದು ಕರೆಯುತ್ತಾರೆ, ಇಲ್ಲಿನ ಹಳ್ಳಿಗಳ ಆಡಳಿತ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿದೆ. ನಮ್ಮಲ್ಲಿ ಪ್ರತಿಯೊಂದು ಗ್ರಾಮಕ್ಕೂ ಪಂಚಾಯಿತಿ ಇದ್ದಂಗೆ ಇಲ್ಲಿ ಆವ ವ್ಯವಸ್ಥೆಯಿದ್ದಂತೆ. ಪ್ರತಿಯೊಂದು ಹಳ್ಳಿಗೂ ಮುಖಂಡನು ಒಬ್ಬ ಇರುತ್ತಾನೆ , ಅವನನ್ನು ಮೊಪೇನ್ ಎಂದು ಕರೆಯುತ್ತಾರೆ , ಗ್ರಾಮದ ಜನತೆಯು ತಮ್ಮ ಜೊತೆಗಿರುವ ಅತ್ಯಂತ ಸಮರ್ಥವಾಗಿರುವವನ್ನು  ಮೊಪೇನ್ ಎಂದು  ತಾವೇ ಆರಿಸುತ್ತಾರೆ.  ಸಂಪೂರ್ಣ ಹಳ್ಳಿಯ ಜವಾಬ್ದಾರಿಯನ್ನು ಮೊಪೇನ್ ಕೈಗೆ ನೀಡುತ್ತಾರೆ, ಮೊಪೇನ್ ಸಹಾಯಕ್ಕೆ ಮತ್ತೆ ಮೂವರನ್ನು ನೇಮಿಸುತ್ತಾರೆ. 

ನಾವು ಫಾಲೆಸ್ಸೆರಿಗೆ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮೋಪತಿ(ಮಹಿಳಾ ಮುಖಂಡೆ) ನಮಗೆ ಸ್ವಾಗತಿಸಿ ತಮ್ಮ ಹಳ್ಳಿ ಮನೆ ಬಗ್ಗೆ ವಿವರ ನೀಡಿ ತಮ್ಮ ಸ್ಪರ್ಧಾ ದೋಣಿಯನ್ನು ತೋರಿಸಿ ತಮ್ಮ ಸಂಸ್ಕೃತಿ ಹಾಗು ಆಚಾರ ವಿಚಾರಗಳನ್ನು ತಿಳಿಸಿ ಕೊಟ್ಟು ತಮ್ಮ ಜವಾಬ್ದಾರಿಯ ಬಗ್ಗೆ ತಿಳಿಸಿದಾಗ ನಮ್ಮೊಡನೆ ಬಂದಿದ್ದ ಪ್ರವಾಸಿಗರು ಮೊಪತಿಯ ಬಗ್ಗೆ ಅಭಿಮಾನ ತೋರಿಸಿ ನೀವು ಅತ್ಯಂತ ಧೈರ್ಯ ಶಾಲಿ ಹೆಣ್ಣು ಹೀಗೆಯೇ ಮುಂದುವರೆಯಿರಿ ಎಂದು ಆಶಿಸಿದರು. 

ನಿಮಗೂ ಒಂದು ಅನುಮಾನ ಬರಬಹುದು ಮೊಪೇನ್ ಮತ್ತು ಮೊಪೇನ್  ಗಂಡ ಹೆಂಡ್ತಿಯರಾ ಅಂತ, ಆ ಹುದ್ದೆಯನ್ನು ಸಂಭಾಳಿಸಲು ಯಾರು ಬೇಕಾದರೂ ಅರ್ಹರು ಹಾಗಾಗಿ ಇಬ್ಬರೂ ಗಂಡ ಹೆಂಡತಿ ಆಗಿರಬೇಕಿಲ್ಲ.  ಮೋಪತಿಯ  ಹತ್ತಿರ ಸಂಭಾಷಣೆ ನಡೆಯುವಾಗ ಅಲ್ಲಿನ ಮೊಪೇನ್ ಆಗಲಿ ದ್ವೀಪದ ಗಂಡಸರಾರು ಕಣ್ಣಿಗೆ ಬೀಳಲಿಲ್ಲ ನಮಗೆ  ಹಳ್ಳಿಗೆ ಸ್ವಾಗತ ಕೋರಿದಾಗಿನಂದಲೂ ಚಹಾ ಕುಡಿದು ಹಡಗಿಗೆ ಹೋರಡುವ ಸಮಯ ಸಮೀಪಿಸುತ್ತಿದ್ದರೂ ಸುತ್ತಲೂ  ಅಲ್ಲಿ ದ್ವೀಪದ ಒಬ್ಬರೋ ಇಬ್ಬರೂ ಗಂಡಸರೂ ಬಿಟ್ಟರೆ ಬೇರಾರೂ ಕಾಣಲಿಲ್ಲ.  

ಈ ಹಳ್ಳಿ ಮನೆಯು ಊರಿನಲ್ಲಿರುವ ಎಲ್ಲರೂ ಒಂದು ಕಡೆ ಸಭೆ ಸೇರುವ ಸ್ಥಳ ಹಾಗಾಗಿ ನಮಗೆ ಇಲ್ಲಿಯೇ  ಸಂಜೆಯ ಚಹಾ ಕೂಟಕ್ಕೆ ವ್ಯವಸ್ಥೆ ಮಾಡಿದ್ದರು. ಹಳ್ಳಿಯ ಮನೆಯಲ್ಲಿ ಕೆಲವು ಇತಿಹಾಸದ ಬಗೆಗಿನ ಮಾಹಿತಿಯ ಚಿತ್ರಪಟಗಳು, ದ್ವೀಪಕ್ಕಾಗಿ ದುಡಿದ ಹಿರಿಯರ ಭಾವಚಿತ್ರಗಳು ಅಲ್ಲದೇ ಆ ದ್ವೀಪದಲ್ಲಿ ನಡೆಯುವ ವಾರ್ಷಿಕ ದೋಣಿ ಸ್ಪರ್ಧೆಯಲ್ಲಿ ಬಳಸುವ ದೋಣಿಯನ್ನು ಸಿಂಗರಿಸಿ ಇಡಲಾಗಿತ್ತು. ಇಲ್ಲಿನ ಬಹುತೇಕರು ಇಸ್ಲಾಂ ಜನಾಂಗದವರು, ಆದರೂ ಕ್ರಿಸ್ತಶಕ ೧೫೦೦ಕ್ಕೂ ಹಿಂದೆಯೇ ಮಾನವನ ಆಳ್ವಿಕೆಗೆ ಈ ದ್ವೀಪ ಒಳಪಟ್ಟಿತ್ತು, ಶತ ಶತಮಾನಗಳಿಂದ ಮುಸ್ಲಿಂ ಜನಾಂಗದವರು ನೆಲೆಸಿದ್ದರೂ ಇಲ್ಲಿನ ಮೂಲ ಜನಾಂಗ ಯಾವುದು ಎಂದು ಗುರುತಿಸುವುದು ತಸು ಕಷ್ಟ. ಆದರೆ ಬಹುತೇಕ ದ್ವೀಪವಾಸಿಗಳು ಸ್ನೇಹಪ್ರಿಯರು ಮತ್ತು ಭಾರತವನ್ನು ತಮ್ಮ ಮಾತೃ ದೇಶ ಎಂದು ಒಪ್ಪಿರುವುದು ಎಂಬುದು ಮಾತ್ರ ಸತ್ಯ .                                                                                                                                                                       

ಇಲ್ಲಿ ಹಳ್ಳಿಗಳ ಗಡಿ ಇಲ್ಲವೇ ಇಲ್ಲ ಎಲ್ಲವೂ ಒಂದೇ ರೀತಿಯೆಂದು ಭಾಸವಾಗುತ್ತದೆ  ಬಹುಶ ಮನೆಗಳೇ ಗಡಿಗಳಾಗಿವೆ . ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿ ಸಂಪರ್ಕಿಸಲು ಇರುವ ರಸ್ತೆಗಳೆಲ್ಲ ಹಾವು ಹರಿದಂತೆ ಕಾಣುವ ಸಿಮೆಂಟಿನ ರಸ್ತೆಗಳು, ಈ ರಸ್ತೆಗಳಲ್ಲಿ ರಾಜ ರೋಷವಾಗಿ ಓಡಾಡುವ ಮೋಟಾರು ವಾಹನಗಳು, ರಸ್ತೆ  ಬದಿಯಲ್ಲಿ ಪ್ರಯಾಣಿಕನಿಗೆ ಪ್ರಾಮಾಣಿಕವಾಗಿ ನೆರಳು ನೀಡುವ ಕಲ್ಪ ಋಕ್ಷಗಳು , ಅವಿರತವಾಗಿ ಆಹಾರ ಹುಡುಕುವ ಕುಕ್ಕುಟಗಳು , ಅತಿಥಿಗಳನ್ನು ಮನೆಗೆ ಆಹ್ವಾನಿಸುವ ವಾಯಸಗಳು ಸರ್ವೇ ಸಾಮಾನ್ಯ. ಅದರಲ್ಲೂ ಕುಕ್ಕುಟವೊಂದು ನಮ್ಮ ವಾಹನದ ಜೊತೆ ಪೈಪೋಟಿಗೆ ಬಿದ್ದಂತೆ ಓಡುತ್ತಲೇ  ವಿಮಾನ ರನ್ ವೆಯಿಂದ ಹೇಗೆ ಹಾರುತ್ತದೆಯೂ ಹಾಗೆ ಹಾರಿ ನಮ್ಮ ವಾಹನದ ಎಡದಿಂದ ಬಲಕ್ಕೆ ಹಾರಿ ಅಲ್ಲೇ ಇದ್ದ ಗಿಡದ ಮೇಲೆ ಕುಳಿತ ದೃಶ್ಯ ಮಾತ್ರ ಕಣ್ಣಿಗೆ ಅಚ್ಚಳಿಯದೆ ಉಳಿದು ಹುಬ್ಬೇರಿಸುವಂತೆ ಮಾಡಿತು . 

ಇಲ್ಲಿನ ವಿಶೇಷ ಎಂದರೆ ವರ್ಷಕ್ಕೊಮ್ಮೆ ನವೆಂಬರ್ ಇಲ್ಲವೇ ಡಿಸೇಂಬರ್ ತಿಂಗಳಲ್ಲಿ ನಡೆಯುವ ‘ ನ್ಯಾಷನಲ್ ಮಿನಿಕಾಯ್ ಫೆಸ್ಟ್ ‘ . ಮಿನಿಕಾಯ್  ದ್ವೀಪದ ಸಂಸ್ಕೃತಿ ಹಾಗು ಆಚರಣೆಗಳ ಮಹಾಮೇಳದಲ್ಲಿ ದ್ವೀಪದ ಹತ್ತು ಹಳ್ಳಿಗಳು ಭಾಗಿಯಾಗುತ್ತವೆ. ಒಂದೊಂದು ಹಳ್ಳಿಗೂ ತಮ್ಮದೇ ಅದೇ ಜಲ ದೋಣಿ ಇರುತ್ತದೆ. ಈ ದೋಣಿ ಸ್ಪರ್ಧೆಯ ವೀಕ್ಷಣೆಗೆ  ರಾಷ್ಟ್ರೀಯ ಹಾಗು ಅನಂತರ ರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ದೋಣಿ ಸ್ಪರ್ಧೆಯಲ್ಲಿ ಗೆದ್ದ ಹಳ್ಳಿಯು ಉಳಿದ  ಹಳ್ಳಿಗೂ  ಔತಣಕೂಟ ಏರ್ಪಡಿಸುತ್ತಾರೆ. ಹಾಗಾಗಿ ಇಲ್ಲಿ ಎಲ್ಲವರು ನಮ್ಮವರೇ… 

ಈ ಎಲ್ಲಾ ಮಾಹಿತಿ ಪಡೆಯುತ್ತಿದ್ದಾಗಲೇ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗಲು ಆತುರನಾಗಿದ್ದ, ಇದಲ್ಲದೇ ನಮ್ಮ ರಾತ್ರಿಯ ನೆಲೆಯು ಮತ್ತೆ ಹಡಗಿನಲ್ಲೇ ಆಗಿದ್ದರಿಂದ ಮತ್ತೆ ನೀರಿನಲ್ಲಿಸುಮಾರು  ಅರ್ಧ ಗಂಟೆಯ ಜಲ ಪ್ರಯಾಣ  ಹಾಗಾಗಿ ಟೂರ್ ಮ್ಯಾನೇಜರ್ ಎಲ್ಲರೂ ಹೊರಡೋಣ ಜೆಟ್ಟಿಗೆ ಹೋಗಲು ವಾಹನ ತಯಾರಿದೆ ಎಂದು ಆದೇಶವಿತ್ತ. ಮೊದಲ ದಿನ ತಸು ತ್ರಾಸದಾಯಕವಾಗಿತ್ತಾದಾರು ಒಮ್ಮೆ ಸಂಪೂರ್ಣ ದ್ವೀಪವನ್ನು ಸಂದರ್ಶಿಸಿ ಹೊರಟಿದ್ದರೆ  ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ಭಾರವಾದ ಮನಸಿನ್ನಿದ  ಮಿನಿಕಾಯ್ ಮಾಯೆಗೆ  ವಿದಾಯ ಹೇಳುತ್ತಲೇ ಜೆಟ್ಟಿ ಕಡೆಗೆ ಹೊರಟೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೭

ಲೈಟ್ ಹೌಸ್ ಮೇಲೆ ಇದ್ದಾಗ ಸಮುದ್ರದ ಮೇಲಿನ ಗಾಳಿ ಬಿಸುತ್ತಿದ್ದರಿಂದ ಆಯಾಸವೆಲ್ಲ ಹೋಗಿ ಹೊಸ ಚೈತನ್ಯ ಬಂದಿತ್ತು ಆದರೆ  ಲೈಟ್ ಹೌಸ್ ನಿಂದ  ಇಳಿದು  ಹೊರಗೆ ಬರುವ ಹೊತ್ತಿಗಾಗಲೇ  ರವಿಯು  ಉಗ್ರಪ್ರತಾಪನಾಗಿದ್ದ , ಮೈಯಲ್ಲಿ ಗಂಗೆಯ ಪ್ರವಾಹ ಅಲ್ಲಲ್ಲಿ ಸಣ್ಣ ಝರಿಯ ರೂಪದಲ್ಲಿ ಜಲಪಾತಗಳನ್ನು ಸೃಷ್ಟಿಸಿದ್ದಳು,  ಗಂಗೆಯನ್ನು ಸಾಗರಕ್ಕೆ ಲೀನಾ ಮಾಡುವ ಭಗೀರಥ ಪ್ರಯತ್ನ  ಮಾಡಿ  ನಮ್ಮ ದೇಹದ ತಾಪ ಕಡಿಮೆ ಮಾಡಿಕೊಳ್ಳುವ  ಅವಶ್ಯಕತೆಯಿತ್ತು , ಹಾಗಾಗಿ  ನಾವು ತುಂಡಿ ಬೀಚ್ ಗೆ ಯಾವಾಗ ತಲುಪುತ್ತೇವೋ ಎಂದು ಕಾಯುತ್ತಿದ್ದೇವು. 

ನಮ್ಮನ್ನು ಹೊತ್ತ ವಾಹನ ತೆಂಗಿನ ಮರಗಳ ಸಾಲ ನೆರಳಲ್ಲಿ ತುಂಡಿ ಬೀಚ್ ಕಡೆಗೆ  ಹೊರಟಿತ್ತು, ಮಿನಿಕಾಯ್ ದ್ವೀಪದಲ್ಲಿ  ಹಲವಾರು ಬೀಚ್ ಗಳಿವೆ, ಅವುಗಳಲ್ಲಿ ತುಂಡಿ ಬೀಚ್ ಪ್ರಸಿದ್ಧವಾದದು, ಈ ಬೀಚ್ ಇತ್ತೀಚೆಗೆ  ಅಂತರ ರಾಷ್ಟ್ರೀಯ  ನೀಲಿ ಧ್ವಜ ಟ್ಯಾಗ್ ಮಾನ್ಯತೆ ಪಡೆದಿದೆ. ಒಂದು ಸಮುದ್ರ ಕಿನಾರೆಯನ್ನು ನೀಲಿ ಧ್ವಜ ಟ್ಯಾಗ್ ಬೀಚ್ ಪ್ರಮಾಣಕರಿಸಿದ್ದಾರೆ  ಅಂದರೆ ಆ  ಸಮುದ್ರ ಕಿನಾರೆಯು  ವಿಶ್ವದ ಅತ್ಯಂತ ಸ್ವಚ್ಛ ಹಾಗು ಪರಿಸರ ಸ್ನೇಹಿ ಕಿನಾರೆಯೆಂದು. 

ಬ್ಲೂ ಫ್ಲಾಗ್ ಪ್ರೋಗ್ರಾಂ ಅನ್ನು ಕೋಪನ್ ಹ್ಯಾಗನ್, ಡೆನ್ಮಾರ್ಕ್-ಪ್ರಧಾನ ಕಛೇರಿಯ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ನಡೆಸುತ್ತದೆ. ನೀಲಿ ಧ್ವಜಕ್ಕೆ ಅರ್ಹತೆ ಪಡೆಯಲು, ಕಠಿಣ ಪರಿಸರ, ಶೈಕ್ಷಣಿಕ, ಸುರಕ್ಷತೆ ಮತ್ತು ಪ್ರವೇಶದ ಮಾನದಂಡಗಳ ಸರಣಿಯನ್ನು ಪೂರೈಸಬೇಕು ಮತ್ತು ನಿರ್ವಹಿಸಬೇಕು. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸಮುದ್ರ ತೀರಗಳಿದ್ದರು ಕೇವಲ ೧೩ ಕಿನಾರೆಗಳು ಮಾತ್ರ ಬ್ಲೂ ಫ್ಲಾಗ್ ಕಿನಾರೆಯೆಂದು ಮಾನ್ಯತೆ ಪಡೆದಿವೆ. ಒರಿಸ್ಸಾದ  ಕೋನಾರ್ಕ್ ಕರಾವಳಿಯಲ್ಲಿರುವ ಚಂದ್ರಭಾಗ ಕಡಲತೀರವು ನೀಲಿ ಧ್ವಜ ಪ್ರಮಾಣೀಕರಣವನ್ನು ಪಡೆದ ಭಾರತದ ಹಾಗು ಏಷ್ಯಾ ಖಂಡದ ಮೊದಲ ಕಡಲ ಕಿನಾರೆಯಾಗಿದೆ. 

ನಾವು ಸಮುದ್ರ ತೀರಕ್ಕೆ ಬರುವ ಹೊತ್ತಿಗಾಗಲೇ ನಮ್ಮ ಜೊತೆಯಲ್ಲಿ ಬಂದಿದ್ದ ಪ್ರವಾಸಿಗರು ಅದರಲ್ಲೂ ೭೦ರ ತರುಣ ತರುಣಿಯರು ಸಮುದ್ರದ  ಆಳ ಅಳೆಯಲು  ಸುಮಾರು ಅರ್ಧ ಕಿಲೋಮೀಟರು ನಡೆಯುತ್ತಾ ಮುಂದೆ ಸಾಗಿದ್ದರು.  ನಾವು ನೀರಿಗಿಳಿದಾಗಲೇ ಗೊತ್ತಾಗಿದ್ದು ಇಲ್ಲಿ ಪಾಪಿ ಸಮುದ್ರ ಹೊಕ್ಕರು ಮೊಣಕಾಲು ನೀರು ಎನ್ನುವ ಗಾದೆ ಇಲ್ಲಿ ಶುದ್ಧ ಸುಳ್ಳು ಅಂತ , ನೀವು  ನೀರಿನಲ್ಲಿ ಸುಮಾರು ೨ ಕಿಲೋಮೀಟರು ನಡೆದರೂ ಸಹ ಸಮುದ್ರದ ಸ್ಪಟಿಕದಷ್ಟು ಶುಭ್ರವಾದ ತಳ ಸ್ಪಷ್ಟವಾಗಿ ನಿಮಗೆ ಕಾಣುತ್ತಲೇ ಇರುತ್ತದೆ. ಅಬ್ಬಬಾ ಎಂದರೆ ನಮ್ಮ ದೇಹದ ಮುಖ ಭಾಗದ ವರೆಗೂ ನೀರು ಬರುತ್ತದೆ, ಹಾಗಂತ ಬಹಳ ದೂರದ ವರೆಗೂ ನಡೆಯುವುದಕ್ಕೆ ಆಗುವುದಿಲ್ಲ. ಪ್ರಕೃತಿಯ ಈ  ಅದ್ಭುತ ರಚನೆಯ ಹಿನ್ನಲೆ ತಿಳಿಯಬೇಕಾದ ಅವಶ್ಯಕತೆಯಿದೆ. 

ನಾವೆಲ್ಲ ಭೂಮಿಯ ಮೇಲೆ ಲಾವಾ ರಸವನ್ನು ಉಗಿಯುವ ಅಗ್ನಿಪರ್ವತಗಳ ಬಗ್ಗೆ ತಿಳಿದಿದ್ದೇವೆ ಹಾಗೆಯೇ ಸಮುದ್ರ ಒಳಗೂ ಸಹ ಇದೆ ರೀತಿಯ ಲಾವಾರಸವನ್ನು ಉಗುಳುವ  ಹಲವಾರು ಅಗ್ನಿಪರ್ವತಗಳಿವೆ, ಈ ಅಗ್ನಿಪರ್ವತಗಳು ಹೊಸ ದ್ವೀಪ ಇಲ್ಲವೇ ಹೊಸ ಭೂಭಾಗದ ರಚನೆಗೆ ಕಾರಣವಾಗುತ್ತವೆ.  ಸಮುದ್ರದ ಒಳಗಿನ ಅಗ್ನಿ ಪರ್ವತಗಳನ್ನು ನಾವು ಸೀ ಮೌಂಟ್ ಎನ್ನುತ್ತೇವೆ ,  ಮೊದಲ ಹಂತದಲ್ಲಿ ಸಮುದ್ರ ಒಳಗಿನಿಂದ ಲಾವಾರಸ ಸತತವಾಗಿ ಉಕ್ಕಿದಾಗ ಸಮುದ್ರದ ಮೇಲ್ಬಾಗವನ್ನು ತಲುಪುತ್ತದೆ,  ಅದು ಲಾವಾವನ್ನು ಇನ್ನೂ ಉಕ್ಕುತ್ತಿದ್ದರೆ..  ಸೀ ಮೌಂಟ್ ಇನ್ನು ಎತ್ತರಕ್ಕೆ ಬೆಳೆಯುತ್ತಲೇ ಹೋಗುತ್ತದೆ, ಮುಂದೆ ಇದೆ ಒಂದು ದ್ವೀಪವಾಗುತ್ತದೆ. ದ್ವೀಪದ ಸುತ್ತಲೂ  ಜಲಚರಗಳ  ಬೆಳವಣಿಗೆಯಾಗುತ್ತದೆ, ನಂತರ ಕೊರಲ್ ಬಂಡೆಗಳು ಸೃಷ್ಟಿಯಾಗುತ್ತದೆ. ಮುಂದೆ ಈ ಭೂಮಿಯ ಮೇಲೆ ಸೃಷ್ಟಿಯಾದ ಅಗ್ನಿಪರ್ವತ  ಸಾಗರದ ಅಲೆಗಳು ಮತ್ತು ಪರಿಸರದಲ್ಲಿ ಆಗುವ ಬದಲಾವಣೆಗಳಿಂದ ನಿಧಾನವಾಗಿ ನೀರಿನಲ್ಲಿ ನೀರಿನಲ್ಲಿ ಕರಗುತ್ತಾ ನೀರಿನ ಒಳಗೆ ಆಳವಿಲ್ಲದ ಸಮತಟ್ಟಾದ ಜಾಗ ರಚನೆಯಾಗುತ್ತದೆ , ಸುತ್ತಲೂ ಇರುವ ಕೊರಲ್ ಬಂಡೆಗಳ ಸುತ್ತಲೂ ಬಟ್ಟಲಿನ ಆಕಾರದ  ಸಣ್ಣ ಕೆರೆಯ ರಚನೆ ಸೃಷ್ಟಿಯಾಗುತ್ತದೆ ಇದನ್ನೇ ನಾವು ಲಗೊನ್ ಎನ್ನುತ್ತೇವೆ, ಈಗ ನಾವು ನಿರ್ಭಯವಾಗಿ ಓಡಾಡುತ್ತಿದ್ದದು ಇದೆ ಮಿನಿಕಾಯ್ ಲಗೊನ್ ನಲ್ಲಿ.  ಸುತ್ತಲೂ ಇರುವ ಹವಳ ಬಂಡೆಗಳು ಈ ಲಾಗೊನ್ ಅನ್ನು ಸಮುದ್ರದಲ್ಲಿ ಆಗುವ ವೈಪರೀತ್ಯಗಳಿಂದ ದ್ವೀಪವನ್ನು ರಕ್ಷಿಸುತ್ತವೆ. 

ಈ ಸಂಪೂರ್ಣ ರಚನೆಯನ್ನು ಲೈಟ್ ಮೇಲೆ ನಿಂತಾಗ ಕಾಣ ಸಿಗುತ್ತದೆ, ಎಲ್ಲಿ ರಿಫ್ ಇರುತ್ತದೆ ಅದು ಸಮುದ್ರದ ಅಲೆಗಳ ತೀವ್ರತೆಯನ್ನು ನಿಷ್ಕ್ರಿಯಗೊಳಿಸಿ ಸಣ್ಣ ಕೆರೆಯಲ್ಲಿ ಯಾವ ರೀತಿಯ ಅಲೆಗಳು ಇರುತ್ತದೋ ಆ ಸ್ಥಿತಿಗೆ ತರುತ್ತದೆ. 

ಹಾಗಾಗಿ ಈ ಮಿನಿಕಾಯ್ ಲಗೊನ್ ಸಂಪೂರ್ಣ ಸೇಫ್ ಅಂತ ಹೇಳ ಬಹುದು,  ಹಾಗಾಗಿ ಸ್ನೋರ್ಕೆಲ್ಲಿಂಗ್ , ಕಯಾಕಿಂಗ್ , ಸ್ಕೂಬಾ , ಜೆಟ್ ರೈಡ್  ಯಾವುದೇ ಭಯವಿಲ್ಲದೆ ಮಾಡಬಹುದು. ಬ್ಲೂ ಫ್ಲಾಗ್ ಪಡೆದ ಕಿನಾರೆಯಾಗಿದ್ದರಿಂದ ಸಹಜವಾಗಿಯೇ ಅತ್ಯಂತ ಶುಚಿಯಾಗಿ , ಪರಿಸರ ಸ್ನೇಹಿಯಾಗಿತ್ತು, ಕಿನಾರೆಯೂ ಸಹ ಸ್ಪಟಿಕದಷ್ಟು ಶುದ್ಧವಾದ ಮರಳಿನಿಂದ ಆವೃತವಾಗಿದೆ, ತುಂಡಿ ಬೀಚ್ ಅಲ್ಲಿ ಬೀಚ್ ರೆಸಾರ್ಟ್ ಇದ್ದು ಇಲ್ಲಿಯೇ ನಮಗೆ ಮಧ್ಯಾಹ್ನದ ಊಟದ ವ್ಯವಸ್ಥೆಯಾಗಿತ್ತು, ಸ್ವಲ್ಪ ಸಮಯ ಮಗ, ಮಡದಿಯ ಜೊತೆ ಫ್ಯಾಮಿಲಿ ಕಯಾಕಿಂಗ್ ಮಾಡಿ ಸಾಗರವನ್ನು ಅಳವನ್ನು ಅಳೆದು  ಬಂದೆವು.  ನೀರಲ್ಲಿ ಬಿದ್ದರೆ ಮೇಲೇಳಲು ಮನಸ್ಸು ಆಗುವುದಿಲ್ಲ ಹಾಗಾಗಿ ಸಮಯ ಕಳೆದದ್ದು ಗೊತ್ತು ಆಗುವುದಿಲ್ಲ.  ಟೂರ್ ಮ್ಯಾನೇಜರ್ ಫಾಲ್ಲಸರಿ ಹಳ್ಳಿಗೆ ನಾವು ಭೇಟಿ ನೀಡಬೇಕು ಹಾಗಾಗಿ ನಾವೆಲ್ಲ ಹೋರಡಬೇಕು ಎಂದು ತಿಳಿಸಿದ್ದರಿಂದ ನಾವು ಒಲ್ಲದ ಮನಸಿನ್ನಿಂದ ನೀರಿನಿಂದ ಮೇಲೆದ್ದು ಹಳ್ಳಿಯ ಭೇಟಿಗೆ ಅಣಿಯಾದೆವು.